ಚಿಕ್ಕಮಗಳೂರು: `ಕೆಪಿಎಲ್ ಕ್ರಿಕೆಟ್ ಓನರ್ ಪಾರ್ಟಿ ಕಾಂಗ್ರೆಸ್ ಗೆದ್ದರೆ ಚಿಯರ್ಗರ್ಲ್ಸ್ ಜೊತೆ ಕುಳಿತು ಮದ್ಯಪಾನ ಮಾಡುವ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಬೇಕೋ ಅಥವಾ ಬಿಪಿಎಲ್ ಪಟ್ಟಿಯ ಬಡವರ ಪರ ಹೋರಾಟ ಮಾಡುತ್ತ ಬಂದಿರುವ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಬೇಕೋ ಎನ್ನುವುದನ್ನು ಜನತೆ ನಿರ್ಧರಿಸಬೇಕು~ ಎಂದು ಸಿ.ಟಿ.ರವಿ ಮನವಿ ಮಾಡಿದರು.
ನಗರದ ವಿಜಯಪುರದ ಆದಿಭೂತಪ್ಪ ಸಮುದಾಯ ಭವನದಲ್ಲಿ ಭಾನುವಾರ ಬಿಜೆಪಿ ಶಕ್ತಿ ಕೇಂದ್ರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ನಡುವೆ ಇದ್ದು, ಜನರ ಏಳಿಗೆಗೆ ದುಡಿಯುವ ವ್ಯಕ್ತಿಗಳಲ್ಲಿ ಯಾರು ಹಿತವರು ಎಂಬುದನ್ನು ತಿಳಿಯುವ ಶಕ್ತಿ ಮತದಾರರಿಗಿದೆ ಎಂದರು.
ಕಾಂಗ್ರೆಸ್ಗೆ ಸೋನಿಯಾ ಗಾಂಧಿಯವರ ರಾಜಕೀಯ ಹಿತ, ಜೆಡಿಎಸ್ಗೆ ದೇವೇಗೌಡರ ರಾಜಕೀಯ ಹಿತ ಮುಖ್ಯವಾಗಿದೆ. ಆದರೆ ಬಿಜೆಪಿಗೆ ರಾಷ್ಟ್ರೀಯ ಹಿತ ಮುಖ್ಯ. ಹಾಗಾಗಿ ಈ ಚುನಾವಣೆ ಕಾಂಗ್ರೆಸ್, ಜೆಡಿಎಸ್ನ ಪೇಮೆಂಟ್ ಕೋಟಾ ಮತ್ತು ಬಿಜೆಪಿ ಅಭ್ಯರ್ಥಿಯ ಮೆರಿಟ್ ಕೋಟಾ ನಡುವೆ ಏರ್ಪಟ್ಟಿದೆ.
ದೇಶದ್ರೋಹದ ಕೆಲಸವನ್ನು ಹಿಂದುತ್ವವಾದಿಗಳು ಎಂದೂ ಮಾಡಿಲ್ಲ. ಬಿಜೆಪಿಗೆ ಹೆಗಲು ಕೊಡುವ ಕೆಲವು ಮುಸ್ಲಿಮರು ದರ್ಗಾಕ್ಕೆ ಪ್ರಾರ್ಥನೆಗಾಗಿ ತಮ್ಮನ್ನು ಆಹ್ವಾನಿಸಿದ್ದನ್ನು ಕಂಡು ಜೆಡಿಎಸ್ ಮತ್ತು ಕಾಂಗ್ರೆಸ್ಗೆ ಸಂಕಟ ಶುರುವಾಗಿದೆ ಎಂದು ಮೂದಲಿಸಿದರು.
ರಾಜಕೀಯ ನಾಟಕ ಮಾಡುತ್ತಿಲ್ಲ, ವಿಶ್ವಾಸದ ರಾಜಕಾರಣ ಮಾಡುತ್ತಿದ್ದೇವೆ. ಹಿಂದುತ್ವಕ್ಕೆ ಎಂದೂ ನಾವು ಬದ್ಧ. ಬಂದರೆ ಜತೆಯಲ್ಲಿ ಕರೆದುಕೊಂಡು ಹೋಗುತ್ತೇವೆ. ವಿರೋಧಿಸಿದರೆ ಮೆಟ್ಟಿ ಹೋಗುತ್ತೇವೆ. ಸತ್ಯ ಪ್ರತಿಪಾದಿಸಿದ ಹೋರಾಟಕ್ಕಾಗಿಯೇ ಕಳೆದ ಚುನಾವಣೆಯಲ್ಲಿ 25 ಸಾವಿರ ಮತಗಳ ಅಂತರದ ಗೆಲುವು ಸಿಕ್ಕಿದೆ.
ಇದೇ ರೀತಿ ನಮ್ಮ ಅಭ್ಯರ್ಥಿ ಸುನೀಲ್ ಕುಮಾರ್ಗೂ ಜನರು ಆಶೀರ್ವದಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಿಡಿಎ ಅಧ್ಯಕ್ಷ ಬಿ.ರಾಜಪ್ಪ ಮಾತನಾಡಿ, ಕಾರ್ಯಕರ್ತರು ಕಾರ್ಯಕರ್ತರಿಗಾಗಿಯೇ ದುಡಿಯುವ ಏಕೈಕ ಪಕ್ಷ ನಮ್ಮದು.
ಜಾತಿ, ಹಣ, ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದಂತಹವರು ಉನ್ನತ ಹುದ್ದೆಯನ್ನು ಪಕ್ಷದಲ್ಲಿ ಅಲಂಕರಿಸಿಲ್ಲ. ಹಿಂದುಳಿದ ವರ್ಗದ ಸಾಮಾನ್ಯ ಕಾರ್ಯಕರ್ತ ಸುನೀಲ್ ಉಪಚುನಾವಣೆ ಅಭ್ಯರ್ಥಿಯಾಗಿರುವುದು ಇದಕ್ಕೊಂದು ತಾಜಾ ನಿದರ್ಶನ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್, ಶಕ್ತಿ ಕೇಂದ್ರದ ಅಧ್ಯಕ್ಷ ರವಿ, ನಗರಸಭಾ ಸದಸ್ಯರಾದ ಹಿತಾಕ್ಷಿ, ಲೀಲಾ, ಮಂಜುನಾಥ್, ಮುಖಂಡರಾದ ಸಿ.ಎಚ್.ಜಗದೀಶ್, ಸಿ.ಆರ್.ದೇವರಾಜ್, ವಸಂತ್ ಕುಮಾರ್, ವೆಂಕಟೇಶ್, ಬಿ.ಆರ್. ತಿಮ್ಮಶೆಟ್ಟಿ ಇನ್ನಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.