ತರೀಕೆರೆ : ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ಗುಳ್ಳದಮನೆ, ತ್ಯಾಗದಬಾವಿ ಪ್ರದೇಶಗಳಲ್ಲಿ ಶುಕ್ರವಾರ ಕಾಡಾನೆಯೊಂದು ಅಡಿಕೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿದೆ. ಗ್ರಾಮದ ರೈತರಾದ ವಸಂತಕುಮಾರ್, ಸೋಮಶೇಖರಪ್ಪ ಹಾಗೂ ಮೂಡ್ಲಗಿರಿಯಪ್ಪ ಎಂಬುವವರ ತೋಟಗಳಲ್ಲಿ ಬೆಳಿಗ್ಗೆ ಸುಮಾರು 7 ಗಂಟೆಗೆ ಪ್ರತ್ಯಕ್ಷವಾದ ಆನೆಯು ಕಾಡಿನಿಂದ ನೀರು ಕುಡಿಯಲು ಬಂದಿರಬಹುದೆಂದು ಅನುಮಾನಿಸಲಾಗಿದೆ.
ತೋಟಕ್ಕೆ ನುಗ್ಗಿದ ಆನೆಯು ಅಡಿಕೆ ಮರಗಳನ್ನು ನಾಶಪಡಿಸಿದ್ದು, ತೋಟಗಳಲ್ಲಿನ ಕೊಳವೆಬಾವಿಗೂ ಸಹ ಹಾನಿಗೊಳಿಸಿದೆ. ಮೋಟಾರ್, ಪೈಪ್ಲೈನ್ಗಳು ಕಿತ್ತು ಹೋಗಿದ್ದು ಬರಗಾಲದಿಂದ ಬಳಲಿರುವ ರೈತರಿಗೆ ಮತ್ತೆ ಬರೆ ಎಳೆದಂತಾಗಿದೆ ಎಂದು ರೈತರು ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಸಂಜೆ ವೇಳೆವರೆಗೂ ಶ್ರಮಪಟ್ಟು ಆನೆಯನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.