ADVERTISEMENT

ದತ್ತಮಾಲಾ ಅಭಿಯಾನ: ಶ್ರೀರಾಮ ಸೇನೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 9:30 IST
Last Updated 8 ಅಕ್ಟೋಬರ್ 2011, 9:30 IST

ಚಿಕ್ಕಮಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀರಾಮ ಸೇನಾ ವತಿ ಯಿಂದ ನವೆಂಬರ್ 9ರಿಂದ 13 ರ ವರಗೆ ದತ್ತಮಾಲಾ ಅಭಿಯಾನ ನಡೆಯಲಿದೆ. ಅಭಿಯಾನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಸ್ವಾಮೀಜಿಗಳು ಹಾಗೂ ಶ್ರೀರಾಮ ಸೇನೆ ರಾಷ್ಟ್ರಮಟ್ಟದ ಪದಾಧಿಕಾರಿಗಳು, ದತ್ತ ಭಕ್ತರು ಭಾಗವಹಿಸಲಿದ್ದಾರೆ ಎಂದು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಪ್ರಸಾದ್ ಅತ್ತಾವರ ತಿಳಿಸಿದರು.

ದತ್ತಪೀಠದಲ್ಲಿ ಪೂಜೆ, ಹೋಮ, ಹವನ, ದತ್ತ ಪಾದುಕೆಗಳ ದರ್ಶನ ಕಾರ್ಯಕ್ರಮವಿರುತ್ತದೆ. ಜತೆಗೆ ಅದೇ ದಿನ ಬೆಳಿಗ್ಗೆ ನಗರದಲ್ಲಿ ಶೋಭಾ ಯಾತ್ರೆ ನೆರವೇರಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಮುಕ್ತ ಅವಕಾಶ ಕಲ್ಪಿಸಿಕೊಡಬೇಕಾಗಿ ಎರಡನೇ ಬಾರಿಗೆ ಮನವಿ ಮಾಡ ಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಪ್ರಭಾರ ಉಪವಿಭಾಗಧಿಕಾರಿ ಡಾ.ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಿದ ಸೇನೆಯ ಮುಖಂಡರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ದತ್ತಪೀಠದಲ್ಲಿ ದತ್ತ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲು ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗಿತ್ತು. ಈ ಬಾರಿಯೂ ಕೂಡ ಅನ್ನ ಸಂತರ್ಪಣೆ ನಡೆಸಲು ಆರ್ಥಿಕ ನೆರವು ನೀಡಬೇಕು. ನೀರು, ರಸ್ತೆ, ದತ್ತ ಭಕ್ತರಿಗೆ ಪೀಠಕ್ಕೆ ತೆರಳಲು ವಾಹನ ಸೌಕರ್ಯ ಒದಗಿಸಿ, ಅಲ್ಲಿ ನಡೆಯುವ ಪೂಜಾವಿಧಿಯ ಖರ್ಚು-ವೆಚ್ಚವನ್ನು ಜಿಲ್ಲಾಡಳಿತವೇ ಭರಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಬಾರಿಯಾದರೂ ದತ್ತ ಪಾದುಕೆ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸ ಬೇಕು. ಇದನ್ನು ನಮ್ಮ ಸಂಘಟನೆಗೆ ಲಿಖಿತವಾಗಿ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ. ದತ್ತಪೀಠದ ಗುಹೆ  ಶೀಘ್ರ ಪೂರ್ಣ ಗೊಳಿಸಿ, ದತ್ತ ಭಕ್ತರು ಮತ್ತು ಸಾರ್ವ ಜನಿಕರಿಗೆ ಮುಕ್ತ ಅವಕಾಶ ಕಲ್ಪಿಸ ಬೇಕು ಎಂದು ಮನವಿ ಮಾಡಿದ್ದಾರೆ.

ದತ್ತ ಪೀಠದಲ್ಲಿ ವಿಗ್ರಹ ಪ್ರತಿಷ್ಠಾಪಿಸಿ, ಹಿಂದೂ ಅರ್ಚಕರನ್ನು ನೇಮಿಸಬೇಕು;  ಇಸ್ಲಾಂ ವಿಧಾನಗಳು ಮತ್ತು ಗೋರಿಯನ್ನು ನಾಗೇನ ಹಳ್ಳಿ ಯಲ್ಲಿರುವ ಮೂಲ ಬಾಬಾ ಬುಡನ್ ದರ್ಗಾಕ್ಕೆ ಸ್ಥಳಾಂತರಿ ಸಬೇಕೆಂಬ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ವಿ.ಮಹೇಶ್ ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಪ್ಪ, ರಾಜ್ಯ ವಕ್ತಾರ ಮಧುಕರ್ ಮುದ್ರಾಡಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ಲಕ್ಷ್ಮಣ್ ಹುಯಿಗೆರೆ, ಸತೀಶ್ ಪೂಜಾರಿ, ಮಂಜುನಾಥ್, ಮೋಹಿನಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.