ADVERTISEMENT

`ದ್ರೋಹಬಗೆದ ಶಾಸಕ ವಿಶ್ವನಾಥ್'

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 10:41 IST
Last Updated 12 ಡಿಸೆಂಬರ್ 2012, 10:41 IST

ಕಡೂರು: ಶಾಸಕ ಡಾ.ವೈ.ಸಿ.ವಿಶ್ವನಾಥ್ ಸ್ಥಳೀಯ ಕಾರ್ಯಕರ್ತರೊಡನೆ ಸಮಾಲೋಚಿಸದೆ ಕೆಜೆಪಿ ಸೇರಿರುವುದು ತಾಲ್ಲೂಕಿನ ಜನತೆಗೆ ಮಾಡಿದ ದ್ರೋಹ ಎಂದು ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಕೆ.ಎಚ್.ಎ.ಪ್ರಸನ್ನ ಆರೋಪಿಸಿದರು.

ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಾವೇರಿಯಲ್ಲಿ ನಡೆದ ಕೆಜೆಪಿ ಪಕ್ಷದ ಸಮಾವೇಶಕ್ಕೆ ತೆರಳಿದ ತಾಲ್ಲೂಕು ಘಟಕದ ಉಪಾಧ್ಯಕ್ಷ ಗಂಗನಹಳ್ಳಿ ರಾಜಣ್ಣ, ಕಾರ್ಯದರ್ಶಿ ಎಂಆರ್‌ಟಿ ಸುರೇಶ್ ಮತ್ತು ಮತಿಘಟ್ಟ ಶಕ್ತಿ ಕೇಂದ್ರದ ಕಾರ್ಯದರ್ಶಿ ಗೆದ್ಲೆಹಳ್ಳಿ ಓಂಕಾರ ಇವರನ್ನು ಪಕ್ಷದಿಂದ ಅಮಾನತುಗೊಳಿಸಿರುವುದಾಗಿ ಘೋಷಿಸಿದರು. 

ಇವರಿಂದ ತೆರವಾಗಿರುವ ಸ್ಥಾನಗಳಿಗೆ ಬಸವನಹಳ್ಳಿ ದೇವಾನಂದ್ ಉಪಾಧ್ಯಕ್ಷರಾಗಿ, ಬಾಸೂರಿನ ಮಾಸ್ಟರ್‌ಈಶ್ವರಪ್ಪ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದರು.ಶಾಸಕರು ಕೆಜೆಪಿ ಸೇರಿ ಪಕ್ಷಕ್ಕೆ ಚೂರಿ ಹಾಕಿರುವುದರಿಂದ ರಾಜಕೀಯವಾಗಿ ಅವರಿಗೆ ಇನ್ನೂ ಈ ಕ್ಷೇತ್ರದಲ್ಲಿ ಭವಿಷ್ಯವಿಲ್ಲ ಎಂದು ಮತ್ತು ಇವರ ರಾಜಕೀಯ ಜೀವನ ಕಡೆಯಾದಂತೆ ಎಂದು ಭವಿಷ್ಯ ನುಡಿದರು.

ತಾಲ್ಲೂಕು ಬಿಜೆಪಿ ವಕ್ತಾರ ಶಿವಶಂಕರ್ ಮಾತನಾಡಿ, ಇದೇ 18 ರಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನ ಸಮಾವೇಶ ಹಮ್ಮಿಕೊಂಡಿದ್ದು, ಅಂದು ಶಾಸಕರ ವಿರುದ್ಧವೂ ಪ್ರತಿಭಟಿಸಲಾಗುವುದಬೀರೂರು ಅರೇಕಲ್ಲು ಆರ್ ಪ್ರಕಾಶ್, ಸೋಮಪ್ರಸಾದ್, ಎ.ಮಣಿ, ಸುರೇಶ್, ಕೃಷ್ಣಕುಮಾರ್, ನಾಗರಾಜು, ರವಿಶಂಕರ್, ತಾ.ಪಂ.ಸದಸ್ಯ ಬಸವರಾಜಪ್ಪ, ರಾಜಗೋಪಾಲ್ (ಚಿನ್ನರಾಜು) ವಡೇರಹಳ್ಳಿ ಅಶೋಕ್ ಹಾಗೂ ಪುರಸಭೆ ನಾಮಿನಿ ಸದಸ್ಯರು ಇದ್ದರು.

`ಜನಪರ ನಿಲುವಿಗೆ ಕೆಜೆಪಿ ಒತ್ತು'
ಮೂಡಿಗೆರೆ: ರಾಜ್ಯದಲ್ಲಿ ನೂತನವಾಗಿ ಉದಯಿಸಿರುವ ಕೆಜೆಪಿ ಪಕ್ಷವು ಜನಪರ ನಿಲುವಿಗೆ ಬದ್ಧವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹಾವೇರಿಯಲ್ಲಿ ನಡೆದ ಪಕ್ಷದ ಉದ್ಘಾಟನಾ ಸಮಾರಂಭದಲ್ಲಿ ತಾಲ್ಲೂಕಿನ ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದು, ಮುಂದಿನ ಪಟ್ಟಣ ಪಂಚಾಯತಿ, ವಿಧಾನ ಸಭಾ ಚುನಾವಣೆಗಳಲ್ಲಿ ಎಲ್ಲಾ ಕ್ಷೇತ್ರಗಳಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದರು.

ಮುಂದಿನ ವಿಧಾನ ಸಭಾ ಚುನಾವಣೆಗೆ ಕ್ಷೇತ್ರದ ಅಭ್ಯರ್ಥಿಗಳಿಗೆ ಸಮೀಕ್ಷೆ ನಡೆಸುತ್ತಿದ್ದು, ಯಡೆಯೂರಪ್ಪನವರ ಸಿದ್ದಾಂತಗಳನ್ನು ಒಪ್ಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಪಕ್ಷಕ್ಕೆ ಸೇರುವ ಒಲವು ತೋರಿದರೇ ಖಂಡಿತ ಅವರನ್ನು ಪಕ್ಷದಿಂದ ಕಣಕ್ಕಿಳಿಸಿ ಗೆಲುವು ಸಾಧಿಸಲಾಗುವುದು. ಒಂದು ವೇಳೆ ಅವರು ಬರಲು ಒಪ್ಪದಿದ್ದರೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಎಷ್ಟೇ ಪೈಪೋಟಿಯಿದ್ದರೂ ಕೆಜೆಪಿ ಅಭ್ಯರ್ಥಿಯನ್ನು ಮೂಡಿಗೆರೆ ಕ್ಷೇತ್ರದಿಂದ ವಿಧಾನಸಭೆಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿಯ ಮತ್ತೊಬ್ಬ ಮಾಜಿ ಅಧ್ಯಕ್ಷ ರಾಜೇಂದ್ರ ಹಿತ್ಲುಮಕ್ಕಿ ಮಾತನಾಡಿ, ಕೆಜೆಪಿ ಪಕ್ಷಕ್ಕೆ ತಾಲ್ಲೂಕಿನಲ್ಲಿ ಎಲ್ಲಾ ಪಕ್ಷಗಳಿಂದಲೂ ಕಾರ್ಯಕರ್ತರು ಬರಲು ಸಿದ್ಧರಿದ್ದು, ಮುಂದಿನ ರೂಪುರೇಷೆಯಂತೆ ತಾಲ್ಲೂಕಿನೆಲ್ಲೆಡೆ ಕೆಜೆಪಿ ಪಕ್ಷವನ್ನು ಬಲಗೊಳಿಸಲಾಗುವುದು. ಬಿಜೆಪಿಯಲ್ಲಿ ಸಂಘ ಪರಿವಾರದ ಹಸ್ತಕ್ಷೇಪ ಇರುವವರೆಗೂ ಜನತೆಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದರು. ಪಕ್ಷದೊಳಗಿನ ಆಂತರಿಕ ಕಲಹಗಳೇ ಬಿಜೆಪಿಯನ್ನು ಇಬ್ಭಾಗಮಾಡಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.