ಅಜ್ಜಂಪುರ: ‘ಮೈಸೂರಿನಲ್ಲಿ ನನ್ನ ವಾಹನ ರಸ್ತೆಗಿಳಿಯದಿದ್ದರೂ ಅತೀ ವೇಗದ ಚಾಲನೆ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ದಂಡ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ’ ಎಂದು ಪಟ್ಟಣದ ಪ್ರಗತಿ ಫರ್ಟಿಲೈಸರ್ ಮಾಲೀಕ ಜಿ.ಬಿ.ಹೇಮಂತಕುಮಾರ್ ಆರೋಪಿಸಿದ್ದಾರೆ.
ಸೆಪ್ಟೆಂಬರ್ 2ರಂದು ಬೆಳಿಗ್ಗೆ ಮೈಸೂರಿನ ಕೃಷ್ಣರಾಜ ಟ್ರಾಫಿಕ್ ನಜರ್ಬಾದ್ ರಸ್ತೆಯಲ್ಲಿ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಹಾದು ಹೋಗಿದೆ. ಈ ಹಿನ್ನೆಲೆಯಲ್ಲಿ ದಂಡ ಪಾವತಿಸುವಂತೆ ನೋಟಿಸ್ ನೀಡಿದ್ದು, ಪೊಲೀಸರು ನೀಡಿರುವ ನೋಟಿಸ್ನ ಜತೆಗೆ ಕಾರಿನ ನಂಬರ್ ಪ್ಲೇಟ್ ಉಳ್ಳ ಎಂ–18 P 3834 ಸಂಖ್ಯೆಯ ಮಹೀಂದ್ರ ಎಕ್ಸ್ಯುವಿಯ ಚಿತ್ರವನ್ನೂ ಕಳುಹಿಸಿದ್ದಾರೆ.
ಈ ಪೈಕಿ ಪೊಲೀಸರು ನೀಡಿರುವ ಕಾರಿನ ಚಿತ್ರದ ಸಂಖ್ಯೆ ಮತ್ತು ತಮ್ಮ ಕಾರಿನ ಸಂಖ್ಯೆ ಎರಡೂ ಒಂದೇ ಆಗಿದೆ. ಮೈಸೂರಿನಲ್ಲಿ ಯಾರೋ ನಮ್ಮ ಕಾರಿನ ಸಂಖ್ಯೆ ಬಳಸಿದ್ದಾರೆ. ಅದು ನಕಲಿ ಎಂದು’ ದೂರಿದ್ದಾರೆ.
ಅಂದು ನಾನು ಮೈಸೂರಿಗೆ ಹೋಗಿಲ್ಲ ಹಾಗೂ ಬೇರೆ ಯಾರು ಕೊಂಡೊಯ್ದಿಲ್ಲ. ಕಾರನ್ನು ಶೆಡ್ನಲ್ಲಿಯೇ ಇರಿಸಿದ್ದು, ನಮಗೆ ತಿಳಿದಂತೆ ಯಾರೋ ಅನಾಮಿಕರು ನಮ್ಮ ಕಾರಿನ ನಕಲಿ ಸಂಖ್ಯೆಯನ್ನು ಬಳಸಿದ್ದಾರೆ.
ಕೂಡಲೇ ನಕಲಿ ಸಂಖ್ಯೆ ಬಳಸಿದ ವಾಹನ ಮತ್ತು ಅದರ ಮಾಲೀಕರನ್ನು ಪತ್ತೆ ಮಾಡಬೇಕು. ಅವರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಬೇಕು’ ಎಂದು ಮೈಸೂರಿನ ನಜರ್ಬಾದ್ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿರುವುದಾಗಿ’ ಜಿ.ಬಿ.ಹೇಮಂತ್ಕುಮಾರ್ ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.