ADVERTISEMENT

`ನಗರದ ವಿವಿಧೆಡೆ ಸಿಸಿ ಕ್ಯಾಮೆರಾ ಅಳವಡಿಕೆ'

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 5:27 IST
Last Updated 2 ಜುಲೈ 2013, 5:27 IST

ಚಿಕ್ಕಮಗಳೂರು: ಜಿಲ್ಲೆಯ 7 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ನಗರದ ಹನುಮಂತಪ್ಪ ಮತ್ತು ಎನ್‌ಎಂಸಿ ವೃತ್ತಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳು ವಾರದೊಳಗೆ ಕಾರ್ಯಾರಂಭಗೊಳ್ಳಲಿವೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎನ್.ಶಶಿಕುಮಾರ್ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎರಡನೆಯ ಹಂತವಾಗಿ ಅಗತ್ಯವಿರುವ ಸಿಸಿ ಕ್ಯಾಮೆರಾಗಳನ್ನು ಸರಬರಾಜಾಗಲಿವೆ. ಅಗತ್ಯ ಸ್ಥಳಗಳಲ್ಲಿ ಅವುಗಳನ್ನು ಅಳವಡಿಸಲಾಗುವುದು. ಶೃಂಗೇರಿಯಲ್ಲಿ 2, ಕೊಟ್ಟಿಗೆಹಾರದ ಬಳಿ 1, ಚಿಕ್ಕಮಗ ಳೂರು ನಗರದಲ್ಲಿ 2, ಎಂ.ಸಿ.ಹಳ್ಳಿ 1, ಕಡೂರು ಮತ್ತು ತರೀಕೆರೆಯಲ್ಲಿ ತಲಾ 1 ಸಿಸಿ ಕ್ಯಾಮೆರಾಗಳನ್ನು ಈಗಾಗಲೇ ಅಳವಡಿಸಲಾಗಿದೆ ಎಂದರು.

ನಗರದ ಎಂ.ಜಿ. ಮತ್ತು ಐ.ಜಿ.ರಸ್ತೆಗಳ ಅಗತ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಈ ಎರಡು ರಸ್ತೆಯ ಅಂಗಡಿಗಳ ಮಾಲೀಕರ ಸಭೆ ಕರೆದು ಚರ್ಚಿಸಲಾಗುವುದು. ದಾನಿಗಳ ಕ್ಯಾಮೆರಾ ನೀಡಲು ಮುಂದೆ ಬಂದರೆ ಆದಷ್ಟು ಬೇಗ ಕ್ಯಾಮೆರಾ ಅಳಡಿಸಲಾಗುವುದು ಎಂದು ಅವರು ಹೇಳಿದರು.

ಆರೋಗ್ಯ ಭಾಗ್ಯ ಯೋಜನೆಯಡಿ ಪೊಲೀಸರು ಮತ್ತು ಅವರ ಕುಟುಂಬದವರ ಚಿಕಿತ್ಸೆಗೆ ನಗರದಲ್ಲಿ ಮೂರು ಆಸ್ಪತ್ರೆಗಳನ್ನು ಗೊತ್ತುಪಡಿಸಲಾಗಿತ್ತು. ಈಗ ಸರ್ಕಾರ ನೀಡುತ್ತಿರುವ ಚಿಕಿತ್ಸೆವೆಚ್ಚದ ಕಡಿಮೆಯಾಗಿದ್ದರಿಂದ ಎರಡು ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿರುವ ಕುರಿತು ಕೇಳಿದಾಗ, ಆಸ್ಪತ್ರೆ ಮುಖ್ಯಸ್ಥರೊಂದಿಗೆ ಮಾತು ಕತೆ ನಡೆಸಿ ಇಲಾಖೆ ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಹೇಳಿದರು.

ಕಳಸ ಸಮೀಪ ಗ್ರಾಮವೊಂದರ ಮಗು ನಾಪತ್ತೆಯಾಗಿರುವ ಕುರಿತು ಕೇಳಿದಾಗ, ಆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಪತ್ತೆಕಾರ್ಯಕ್ಕೆ ಶ್ರಮಿಸಲಾಗುತ್ತಿದೆ ಎಂದು ಉತ್ತರಿಸಿದರು.

ಕೊಪ್ಪಕ್ಕೆ ಮಂಜೂರಾಗಿದ್ದ ಸ್ವ ಉದ್ಯೋಗ ತರಬೇತಿ ಕೇಂದ್ರ ಆರಂಭಿಸದಿರಲು ಸರ್ಕಾರ ಮುಂದಾಗದಿರುವುದನ್ನು  ಕುರಿತು ಶಾಸಕ ಜೀವರಾಜ್ ನೀಡಿದ್ದ ಹೇಳಿಕೆ ಬಗ್ಗೆ ಕೇಳಿದಾಗ, ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.

ರೌಡಿ ಪಟ್ಟಿಯಲ್ಲಿರುವ ವ್ಯಕ್ತಿಗಳ ಚಲನವಲನ ಬಗ್ಗೆ ಗಮನ ಹರಿಸಲಾಗುತ್ತಿದೆ. ಭಾನುವಾರ ತಾಲ್ಲೂಕು ಕೇಂದ್ರಗಳು ಮತ್ತು ಬೀರೂರಿನಲ್ಲಿ ರೌಡಿ ಶೀಟರ್‌ಗಳ ಪೆರೇಡ್ ನಡೆಸಲಾಯಿತು. ಅವರ ಭಾವಚಿತ್ರ ಮತ್ತು ಮೊಬೈಲ್ ನಂಬರ್‌ಗಳನ್ನು ಪಡೆದು ಕೊಳ್ಳಲಾಯಿತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.