ADVERTISEMENT

ನೆಮ್ಮದಿ ಕೇಂದ್ರ: ಹುದ್ದೆ ಕಾಯಂಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 9:10 IST
Last Updated 10 ಫೆಬ್ರುವರಿ 2011, 9:10 IST

ಚಿಕ್ಕಮಗಳೂರು: ನೆಮ್ಮದಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್‌ಗಳನ್ನು ಕಾ ಯಂಗೊಳಿಸಿ ವೇತನ ಹೆಚ್ಚಳಗೊಳಿಸುವಂತೆ ರಾಜ್ಯ ನೆಮ್ಮದಿ ಕೇಂದ್ರಗಳ ಕಂಪ್ಯೂಟರ್ ಆಪರೇಟರ್‌ಗಳ ಸಂಘದ ಜಿಲ್ಲಾ ಘಟಕ ಒತ್ತಾಯಿಸಿದೆ.ಈ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಸುಬ್ಬರಾಯ ಕಾಮತ್ ಅವರಿಗೆ ಬುಧವಾರ ಮನವಿ ಸಲ್ಲಿಸಿದ ಪದಾಧಿಕಾರಿಗಳು ಜಿಲ್ಲೆಯಲ್ಲಿ 70 ಮಂದಿ ಕಂಪ್ಯೂಟರ್ ಆಪರೇಟರ್‌ಗಳು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡಬೇಕೆಂದು ಮನವಿ ಮಾಡಿದರು.

ಜಿಲ್ಲೆಯ ಎಲ್ಲಾ ನೆಮ್ಮದಿ ಕೇಂದ್ರಗಳಲ್ಲಿ ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರಿಗೆ ಸಾಮಾಜಿಕ ಮತ್ತು ಔದ್ಯೋಗಿಕ ಭದ್ರತೆಯನ್ನು ಒದಗಿಸಬೇಕು. ಸರ್ಕಾರಿ ರಜೆ ದಿನಗಳಂದು ‘ನೆಮ್ಮದಿ’ ಕೇಂದ್ರಗಳಿಗೂ ರಜೆ ನೀಡಬೇಕೆಂದು ಅವರು ಕೋರಿದರು.ಕಂಪ್ಯೂಟರ್ ಆಪರೇಟರ್‌ಗಳಿಗೆ ತಿಂಗಳಿಗೆ 3200 ರೂಪಾಯಿಗಳನ್ನು ನೀಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆಗೆ ತುಂಬಾ ಕಷ್ಟವಾಗಿರುವುದರಿಂದ ವೇತನ ಹೆಚ್ಚಳಗೊಳಿಸಿ ಇವರುಗಳನ್ನು ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡಿಸಬೇಕೆಂದು ಅವರು ತಿಳಿಸಿದರು.

ಕಂಪ್ಯೂಟರ್ ಆಪರೇಟರ್‌ಗಳನ್ನು ಕೆಲಸಕ್ಕೆ ನೇಮಿಸಿಕೊಂಡಿರುವ ಕಂಪೆನಿ ಸಮಯಕ್ಕೆ ಸರಿಯಾಗಿ ವೇತನ ಪಾವತಿಸದೆ, ನಿರ್ಲಕ್ಷ ಧೋರಣೆ ತಾಳುತ್ತಿದೆ. ಮುಂದಿನ 15 ದಿನದೊಳಗೆ ಬೇಡಿಕೆ ಈಡೇರಿಸಬೇಕೆಂದು ಅವರು ಕೋರಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎ.ಮನ್ಸೂರ್, ಉಪಾಧ್ಯಕ್ಷ ಡಿ.ಸಿ.ಸೋಮಶೇಖರ್, ಕಾರ್ಯದರ್ಶಿ ಕೆ.ಪಿ.ಜಯಪ್ರಕಾಶ್, ಖಜಾಂಚಿ ರಾಜೇಶ್, ಸಿಪಿಐ ಮುಖಂಡ ಅಮ್ಜದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.