ADVERTISEMENT

ಪಹಣಿ ದಾಖಲೆ ಸಮರ್ಪಕವಾಗಿರಲಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 8:35 IST
Last Updated 7 ಅಕ್ಟೋಬರ್ 2012, 8:35 IST

ತರೀಕೆರೆ: ಸರ್ಕಾರದ ವಿವಿಧ ಸವಲತ್ತುಗಳನ್ನು ರೈತರು ಪಡೆಯಲು ಪಹಣಿ  ಮುಖ್ಯವಾಗಿದ್ದು, ಅದರಲ್ಲಿ ನಮೂದಾಗುವ ವಿಷಯವನ್ನು ಎಚ್ಚರಿಕೆಯಿಂದ ಪರಿಶೀಲಿಸಿ ನಮೂದಿಸುವಂತೆ ಕಂದಾಯ ಇಲಾಖೆ ನೌಕರರು ಮುಂದಾಗಬೇಕು ಎಂದು ಉಪ ವಿಭಾಗಾಧಿಕಾರಿ ಅನುರಾಧಾ ಹೇಳಿದರು.

ಇಲ್ಲಿನ ಕನಕ ಕಲಾಭವನದಲ್ಲಿ ಶುಕ್ರವಾರ ಕಂದಾಯ, ಕೃಷಿ, ಜಲಾನಯನ, ತೋಟಗಾರಿಕೆ ಮತ್ತು ಅಭಿವೃದ್ಧಿ ಅಧಿಕಾರಿಗಳಿಗಾಗಿ ಏರ್ಪಡಿಸಿದ್ದ  ಕೃಷಿ ಅಂಕಿ-ಅಂಶಗಳ ಮಹತ್ವದ ಅರಿವು ಮೂಡಿಸುವ ಪುನರ್ ಮನನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಹಶೀಲ್ದಾರ್ ರಂಜಿತಾ ಮಾತನಾಡಿ, ಈ ಕುರಿತು ಅನೇಕ ಬಾರಿ ಸಂಬಂಧಿಸಿದ ಇಲಾಖೆಯವರಿಗೆ ಸೂಕ್ತ ಮಾಹಿತಿ ನೀಡಿದರೂ ತಪ್ಪುಗಳು ಆಗುತ್ತಿದೆ. ಇದು ಆಗಬಾರದು. ಅಭಿವೃದ್ಧಿ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಇರುವುದರಿಂದ ಯಾವ ಬೆಳೆಯನ್ನು ಯಾವ ರೈತ ಬೆಳೆದಿದ್ದಾನೆ ಎಂಬುದನ್ನು ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರಿಗೆ ನೀಡುವಂತೆ ತಿಳಿಸಿದರು.

ಸರ್ಕಾರದ ಸವಲತ್ತುಗಳಾದ ಬೆಳೆ ವಿಮೆ, ರಾಜ್ಯದ ಆರ್ಥಿಕ ವರಮಾನ, ಕೃಷಿ ಬೆಳೆಗಳ ಏರು ಪೇರು ಮತ್ತು ಯೋಜನೆಗಳ ತಯಾರಿಗೆ ಪಹಣಿ ದಾಖಲೆಯಲ್ಲಿ ನಮೂದಿಸಿರುವ ಅಂಶಗಳು ಮಹತ್ವದ್ದಾಗಿದೆ ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಸ್.ಎನ್.ವೆಂಕಟೇಶ್ ಮಾತನಾಡಿ, ಪಹಣಿ ಬರೆಯುವಾಗ ಅಥವಾ ನವೀಕರಿಸುವಾಗ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕುರಿತು ತರಬೇತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಆರ್.ರವಿ, ಸದಸ್ಯ ಧಮೇಂದ್ರ, ಕಾರ್ಯ ನಿರ್ವಾಣಾಧಿಕಾರಿ ಸಿ.ದೇವರಾಜಪ್ಪ ಮುಂತಾದವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.