ಕಡೂರು: ದಶಕಗಳ ಕಾಲದ ಬೇಡಿಕೆಯಾಗಿದ್ದ ಕಡೂರು- ಚಿಕ್ಕಮಗಳೂರು ರೈಲು ಸೋಮವಾರ ನನಸಾಯಿತು. ಸಖರಾಯಪಟ್ಟಣದವರೆವಿಗೆ ಕಾಮಗಾರಿ ಸಂಪೂರ್ಣಗೊಂಡಿದ್ದು ಪ್ರಾಯೋಗಿಕವಾಗಿ ಎಂಜಿನ್ ಸಂಚಾರ ನಡೆಸಿತು.
ಕಡೂರು ರೈಲು ನಿಲ್ದಾಣದಿಂದ ಚಿಕ್ಕಮಗಳೂರಿಗೆ ತೆರಳುವ ಕ್ರಾಸ್ ಬಳಿ ರೈಲ್ವೆ ಎಂಜಿನ್ಗೆ ಹೂವು, ತೋರಣ, ಬಾಳೆ ಕಂಬ, ಹೊಸಬಟ್ಟೆಯನ್ನು ತೊಡಿಸಿ ಅಲಂಕರಿಸಿದ ಎಂಜಿನ್ ಸೋಮವಾರ ಮಧ್ಯಾಹ್ನ 12.45ಕ್ಕೆ ಸರಿಯಾಗಿ ರೈಲ್ವೆ ಎಂಜಿನಿಯರ್ ಸಬಾಕರ್ಅವರ ಮಾರ್ಗದರ್ಶನದಲ್ಲಿ ಚಾಲಕರಾದ ಎಸ್.ಸಹಾ ಮತ್ತು ಭಲವಂತ ಕುಮಾರ್ ಎಂಜಿನ್ ಅನ್ನು ಹಳಿಗಳ ಮೇಲೆ ಓಡಿಸುತ್ತಿದ್ದಂತೆ ಸೇರಿದ್ದ ನೂರಾರು ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿತು. ದಶಕಗಳ ಕನಸು ನನಸಾಗುವ ಕಾಲ ಮೂಡಿ ಬಂದಿರುವುದಕ್ಕೆ ಸಂತಸಪಟ್ಟು ಸಿಹಿ ಹಂಚಿದರು.
ಕಡೂರು ನಿಲ್ದಾಣದಿಂದ 16 ಕಿ.ಮೀ. ಮಾತ್ರ ಪ್ರಯಾಣಿಸಿದ ಎಂಜಿನ್ ಬಿಸಲೇಹಳ್ಳಿ, ಸಖರಾಯಪಟ್ಟಣ ನಿಲ್ದಾಣಗಳಲ್ಲಿ ನಿಲ್ಲಿಸುತ್ತಿದ್ದಂತೆ ಸೇರಿದ್ದ ಗ್ರಾಮೀಣ ಪ್ರದೇಶದ ಜನರು ಸಂತೋಷಪಟ್ಟರು. ಇನ್ನು ಒಂದು ತಿಂಗಳಲ್ಲಿ ಈ ಮಾರ್ಗವಾಗಿ ರೈಲು ಸಂಚರಿಸಲಿದೆ ಎಂದು ರೈಲ್ವೆ ಎಂಜಿನಿಯರ್ ಸಬಾಕರ್ ತಿಳಿಸಿದರು. ಗುತ್ತಿಗೆದಾರ ವೆಂಕುರೆಡ್ಡಿ, ರೈಲ್ವೆ ನೌಕರರಾದ ಎ.ದಾಸ್, ಮಂಜುನಾಥ್ ಹಾಗೂ ನೂರಾರು ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.