ADVERTISEMENT

ಬಜೆಟ್‌ನಲ್ಲಿ ಬಡ ಅಲ್ಪಸಂಖ್ಯಾತರಿಗೆ ಜಾಗ ಖರೀದಿಸಲು ಕಡಿಮೆ ಬಡ್ಡಿ ದರದಲ್ಲಿ ರೂ1.ಲಕ್ಷ.

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 10:35 IST
Last Updated 18 ಫೆಬ್ರುವರಿ 2011, 10:35 IST

ಚಿಕ್ಕಮಗಳೂರು: ನಗರಸಭೆಯಲ್ಲಿ ಗುರುವಾರ ಮಂಡಿಸಿದ 4.40 ಕೋಟಿ ರೂಪಾಯಿ ಉಳಿತಾಯ ಬಜೆಟ್‌ಗೆ ಆಡಳಿತ ಪಕ್ಷದ ಸದಸ್ಯರು ಒಪ್ಪಿಗೆ ನೀಡಿದರು.
ಅಧ್ಯಕ್ಷ ಕೆ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಆದಾಯ 82.70ಕೋಟಿ ರೂಪಾಯಿ ಗಳು ಖರ್ಚು 78.29 ಕೋಟಿ ರೂಪಾಯಿ ಸೇರಿದಂತೆ 4.40 ಕೋಟಿ ರೂಪಾಯಿ ಉಳಿತಾಯ ಬಜೆಟ್‌ಗೆ ಸದಸ್ಯ ಪ್ರೇಮ್‌ಕುಮಾರ್ ಸೂಚಿಸಿದರೆ, ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ ಅನುಮೋದಿಸಿದರು.

ಆದರೆ ಈ ಬಜೆಟ್ ಅನ್ನು ವಿರೋಧಪಕ್ಷ ಸದಸ್ಯರಾದ ಅಕ್ಮಲ್ ಮತ್ತು ಶ್ರೀಧರ ಉರಾಳ್ ವಿರೋಧಿಸಿದರು. ಪಾರದರ್ಶಕವಾಗಿ ಬಜೆಟ್ ಮಂಡಿಸಿಲ್ಲ. ಕೆಲವುವಿಷಯಗಳನ್ನು ಮರೆಮಾಚಲಾಗುತ್ತಿದೆ. ಇದು ಉಳಿತಾಯ ಬಜೆಟ್ ಅಲ್ಲ. ಖೋತಾ ಬಜೆಟ್ ಎಂದು ಟೀಕಿಸಿದರು.ನಗರಸಭೆ ಸಂಪನ್ಮೂಲದಿಂದ 18 ಕೋಟಿ ರೂಪಾಯಿ ಗಳನ್ನು ನಿರೀಕ್ಷಿಸಲಾಗಿದೆ. ಅದರಲ್ಲಿ 2ಕೋಟಿ ರೂಪಾಯಿ ಆಸ್ತಿತೆರಿಗೆ, 1.20ಕೋಟಿ ರೂಪಾಯಿ ನೀರಿನ ತೆರಿಗೆ, 60ಲಕ್ಷ ರೂಪಾಯಿ ಕಟ್ಟಡ, ಮಳಿಗೆ ಬಾಡಿಗೆ ವಿವಿಧ ಪರವಾನಗಿ ಯಿಂದ 31ಲಕ್ಷ ರೂಪಾಯಿ, ಅಭಿವೃದ್ಧಿ ಶುಲ್ಕವಾಗಿ 25 ಲಕ್ಷ ರೂಪಾಯಿಗಳು, ರೇವಣಿ, ಕರಗಳು ಹಾಗೂ ಶುಲ್ಕ ಸೇರಿದಂತೆ 16.98 ಕೋಟಿ ರೂಪಾಯಿಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧ್ಯಕ್ಷರು ಹೇಳಿದರು.

ಸರ್ಕಾರದಿಂದ ಎಸ್.ಎಫ್.ಸಿ. ಅನುದಾನ 6ಕೋಟಿ ರೂಪಾಯಿ, 12ನೇಯ ಹಣಕಾಸು ಅನುದಾನದಿಂದ 1.6 ಕೋಟಿ ರೂಪಾಯಿ, ಎಸ್.ಜೆ.ಆರ್.ವೈ. ಅನುದಾನ 15ಲಕ್ಷ ರೂಪಾಯಿ, ಬರಪರಿಹಾರ ಅನುದಾನ 20 ಲಕ್ಷ, ಸಂಸದರು, ಶಾಸಕರ ಅನುದಾನ 20ಲಕ್ಷ ರೂಪಾಯಿ, ವೇತನ ಅನುದಾನ 315 ಲಕ್ಷ ರೂಪಾಯಿ ಕೆ.ಎಂ.ಆರ್. ಪಿ. ಯೋಜನೆಯಡಿ 28.76ಕೋಟಿ ರೂಪಾಯಿಗಳನ್ನು ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಗರಸಭೆಗೆ 78.29ಕೋಟಿ ರೂಪಾಯಿ ಖರ್ಚುಮಾಡಲು ಅಂದಾಜಿಸಲಾಗಿದೆ. ಪರಿಶಿಷ್ಟಜಾತಿ, ಪಂಗಡದ ಅಭಿವೃದ್ಧಿಗೆ 45ಲಕ್ಷ ರೂಪಾಯಿ, ಅಂಗವಿಕಲರ ಅಭಿವೃದ್ಧಿಗೆ 10ಲಕ್ಷ ರೂಪಾಯಿ, ಬಡಜನರ ಕಲ್ಯಾಣಕ್ಕಾಗಿ 14ಲಕ್ಷ ರೂಪಾಯಿ, ಹೊಸರಸ್ತೆ ನಿರ್ಮಾಣಕ್ಕೆ 1.75ಕೋಟಿ, ಹೊಸ ಚರಂಡಿ ನಿರ್ಮಾಣಕ್ಕೆ 1.75 ಕೋಟಿ, ಹೊಸ ಪೈಪ್‌ಲೈನ್‌ಗೆ 1.15 ಕೋಟಿ, ಕಟ್ಟಡ, ಮಳಿಗೆ ನಿರ್ಮಾಣಕ್ಕೆ 1.30ಕೋಟಿ, ಉದ್ಯಾನ ಅಭಿವೃದ್ಧಿಗೆ 50 ಲಕ್ಷರೂ ವ್ಯಯಿಸಲು ತೀರ್ಮಾನಿಸಲಾಗಿದೆ ಎಂದರು.

ರಸ್ತೆ ಚರಂಡಿಗಳ ದುರಸ್ತಿ, ಮೆಟ್ಲಿಂಗ್‌ನಿರ್ಮಾಣಕ್ಕೆ 1.5ಕೋಟಿ, ಒಳಚರಂಡಿ ನಿರ್ವಹಣೆಗೆ2.45ಕೋಟಿ, ಸ್ವಚ್ಛತೆಗಾಗಿ 80 ಲಕ್ಷ, ಬೀದಿ ದೀಪ ನಿರ್ವಹಣೆಗೆ 36ಲಕ್ಷ, ಬೀದಿದೀಪ ಅಳವಡಿಕೆ ಮತ್ತು ಹೊಸದಾಗಿ ಲೈನ್ ಹಾಕಲು 25ಲಕ್ಷ, ನೌಕರರ ವೇತನಕ್ಕೆ 2.50ಕೋಟಿ ರೂಪಾಯಿ ಕಾಯ್ದಿರಿಸಲಾಗಿದೆ. ನಗರದ ಅಭಿವೃದ್ಧಿಗೆ ಕೆ.ಎಂ.ಆರ್.ಪಿ. ಯೋಜನೆಯಡಿ ಬಿಡುಗಡೆಯಾಗುವ ಮೊತ್ತ 287.76ಕೋಟಿ ರೂಪಾಯಿಗಳನ್ನು ನಗರದ ಅಭಿವೃದ್ಧಿಗೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಬಜೆಟ್‌ನಲ್ಲಿ ಕೈಬಿಟ್ಟುಹೋಗಿರುವ ವಿಷಯಗಳನ್ನು ಸೇರಿಸಲು ಮತ್ತು ಅನುದಾನ ಹೆಚ್ಚಳವಾಗಿದ್ದರೆ ಅದನ್ನು ಕಡಿತಗೊಳಿಸಲು ಅವಕಾಶ ಇದೆ ಎಂದು ಸದಸ್ಯ ಎಚ್.ಡಿ.ತಮ್ಮಯ್ಯಹೇಳಿದರು. ಉಪಾಧ್ಯಕ್ಷೆ ಯಶೋಧಶಂಕರ್, ಆಯುಕ್ತ ಕೃಷ್ಣಮೂರ್ತಿ ಬಜೆಟ್ ಮಂಡನೆ ಸಭೆಯಲ್ಲಿ ಇದ್ದರು. 

 ‘ಎಷ್ಟು ಮಂದಿ ಅಧ್ಯಕ್ಷರು?’ 
 ನಗರಸಭೆಗೆ ಎಷ್ಟು ಮಂದಿ ಅಧ್ಯಕ್ಷರು. ಒಬ್ಬರೋ ಅಥವಾ ಮೂರು ಮಂದಿಯೋ?ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಸದಸ್ಯ ಅಕ್ಮಲ್ ಈ ರೀತಿ ಪ್ರಶ್ನಿಸಿದರು. ನಗರಸಭೆ ಅಧ್ಯಕ್ಷರು ಸೇರಿದಂತೆ ಮೂರು ಮಂದಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದು ಮೇಲ್ನೊಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿದರು.

ವಿದ್ಯುತ್ ವ್ಯತ್ಯಯದಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಎಕ್ಸ್‌ಪ್ರೆಸ್ ಕಾಮಗಾರಿ ಯಾವ ಹಂತದಲ್ಲಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ವಿರೋಧ ಪಕ್ಷದ ಸದಸ್ಯ ಚಂದ್ರಪ್ಪ ಒತ್ತಾಯಿಸಿದರು.ಬೀದಿದೀಪ ಅಳವಡಿಸಲು 25ಲಕ್ಷ ರೂ. ಹಣ ನಿಗದಿಪಡಿಸಲಾಗಿದೆ. ಅದರ ನಿರ್ವಹಣೆಗೆ 35ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಇದನ್ನು ಗಮನಿಸಿದರೆ ಮೂಗಿಗಿಂತ ಮೂಗುತಿ ಬಾರವಾದಂತಾಗಿದೆ ಎಂದು ಸಭೆ ಗಮನ ಸೆಳೆದರು ಕುಡಿಯುವ ನೀರು ಮತ್ತು ಬೀದಿದೀಪಕ್ಕೆ  ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.

ನಗರದ ಕೆ.ಎಂ. ರಸ್ತೆ ವಿಸ್ತರಣೆಗೊಳಿಸಿ 1ವರ್ಷವಾಗಿದೆ. ಕಾಮಗಾರಿ ಇನ್ನ ದರೂ ಆರಂಭವಾಗಿಲ್ಲ. ಹೀಗಾದರೆ ಸಾರ್ವಜನಿಕರಿಗೆ ತೊಂದರೆ ಯಾಗುವುದಿಲ್ಲವೇ ಎಂದು ಅಕ್ಮಲ್ ಪ್ರಶ್ನಿಸಿದರೆ, ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕೆಂದು ನಾಮಕರಣ ಸದಸ್ಯ ಲಕ್ಷ್ಮೀಶ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.