ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಶನಿವಾರ ಮೋಡಮುಸುಕಿದ ವಾತಾವರಣ ಹಾಗೂ ಗುಡುಗು, ಸಿಡಿಲಿನ ಆರ್ಭಟ ಇತ್ತು. ಕಡೂರು, ಚಿಕ್ಕಮಗಳೂರು ಮತ್ತು ಶೃಂಗೇರಿಯಲ್ಲಿ ಉತ್ತಮ ಮಳೆಯಾಗಿದೆ.
ತರೀಕೆರೆ ಮತ್ತು ಅಜ್ಜಂಪುದಲ್ಲಿ ಇಡೀ ದಿನ ಮೋಡ ಮುಸುಕಿದ ವಾತಾವರಣ ಇತ್ತು. ಸಂಜೆ 5ರ ಹೊತ್ತಿಗೆ ಕೇವಲ 10 ನಿಮಿಷ ಮಳೆ ಸುರಿದು ತಣ್ಣಗಾಯಿತು. ಸಿಡಿಲಿನ ಆರ್ಭಟಕ್ಕೆ ಕಡೂರಿನ ಸಂಪತ್ಬೇಕರಿ ಕಾಂಪೌಂಡ್ನಲ್ಲಿದ್ದ ತೆಂಗಿನಮರ ಹೊತ್ತಿ ಉರಿಯಿತು. ಅಗ್ನಿಶಾಮದ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ಬಾಳೆಹೊನ್ನೂರಿನಲ್ಲಿ ಸಂಜೆ 3.30ರಿಂದ ಒಂದು ತಾಸು ಭಾರೀ ಗಾಳಿಯೊಂದಿಗೆ ಮಳೆ ಬಂತು. ಆದರೆ ನರಸಿಂಹರಾಜಪುರದ ಜನ ಮಾತ್ರ ಮೋಡ ನೋಡಿ ತೃಪ್ತರಾದರು. ಶೃಂಗೇರಿಯಲ್ಲಿ ಇಳಿಸಂಜೆ ಮಳೆ ಸುರಿಯಿತು. ಗುಡುಗು- ಮಿಂಚಿನ ಆರ್ಭಟ ಇತ್ತು.
ಬೆಳೆಹಾನಿ: ಸಿ.ಟಿ.ರವಿ ಪರಿಶೀಲನೆ
ಚಿಕ್ಕಮಗಳೂರು: ತಾಲ್ಲೂಕಿನ ಕ್ಯಾತನಬೀಡು ಮತ್ತು ಕಣಿವೆಹಳ್ಳಿಯಲ್ಲಿ ಮಳೆಯಿಂದ ಬೆಳೆಹಾನಿಯಾದ ಪ್ರದೇಶಗಳಿಗೆ ಶಾಸಕ ಸಿ.ಟಿ.ರವಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಟೊಮ್ಯಾಟೋ, ಬಾಳೆ, ಕೋಸು, ಬದನೆ, ತೆಂಗು ಸೇರಿದಂತೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ನೀರುಪಾಲಾಗಿದ್ದು ರೈತರ ಸ್ಥಿತಿ ಚಿಂತಾಜನಕವಾಗಿದೆ ಎಂದರು.
ಪ್ರಕೃತಿ ವಿಕೋಪದಿಂದಾಗಿ ಎಕರೆಗೆ 600ರಿಂದ 800 ರೂವರೆಗೆ ಸರ್ಕಾರ ರೈತರಿಗೆ ಪರಿಹಾರ ನೀಡುತ್ತೆ. ಓಬಿರಾಯನ ಕಾಲದ ಪರಿಹಾರದಿಂದ ತೊಂದರೆ ನೀಗಿಸಲು ಸಾಧ್ಯವಿಲ್ಲ. ಬೆಳೆಹಾನಿ ಪ್ರಮಾಣ ಆಧರಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಅವರು ನುಡಿದರು.
ಬೆಳೆನಷ್ಟಕ್ಕೀಡಾಗಿರುವ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಬೀಜ, ಗೊಬ್ಬರಗಳನ್ನು ಕಡಿಮೆ ದರದಲ್ಲಿ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.
ಮುಂಖಡರಾದ ಲೋಕೇಶ್, ಸದಾನಂದ, ಚಂದ್ರಪ್ಪ, ಅನುಸೂಯಮ್ಮ ಮತ್ತು ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.