ADVERTISEMENT

ಬಿಜೆಪಿ ಮುಖಂಡರಿಂದ ಅಧಿಕಾರ ದುರ್ಬಳಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 9:20 IST
Last Updated 3 ಅಕ್ಟೋಬರ್ 2011, 9:20 IST

ಕಳಸ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಾ ಅನೇಕ ಅಕ್ರಮಗಳನ್ನು ಎಸಗುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಬೇಕು ಎಂದು ವಿಧಾನಪರಿಷತ್ ಸದಸ್ಯೆ ಮೋಟಮ್ಮ ಹೇಳಿದರು.
 
ಕಳಸ ಹೋಬಳಿಯಲ್ಲಿ ಬಿಜೆಪಿ ಬೆಂಬಲಿಗರು ಅಕ್ರಮ ಸಕ್ರಮ ಯೋಜನೆಯಲ್ಲಿ ಫಾರಂ ನಂಬರ್ 53ರಲ್ಲಿ ಅಕ್ರಮವಾಗಿ ಕೃಷಿ ಭೂಮಿಗೆ ಮಂಜೂರಾತಿ ಪಡೆದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಎಕರೆಗೆ 50-75 ಸಾವಿರ ರೂಪಾಯಿ ಲಂಚವನ್ನೂ ನೀಡಲಾಗಿದೆ.
 

ಈಗಾಗಲೇ ಭೂಮಿ ಹೊಂದಿದ್ದವರಿಗೂ ಮತ್ತು ಅನೇಕ ವರ್ಷಗಳ ಹಿಂದೆ ಭೂಮಿ ಮಂಜೂರಾದವರಿಗೂ ಮತ್ತೆ ಭೂಮಿ ಮಂಜೂರಾಗಿದೆ ಎಂದು ತಾ.ಪಂ. ಮಾಜಿ ಸದಸ್ಯ ಕೆ.ಸಿ.ಧರಣೇಂದ್ರ ಆರೋಪಿಸಿದಾಗ ಮೋಟಮ್ಮ ಮೇಲಿನ ಸಲಹೆ ನೀಡಿದರು.

`ಮತದಾರರ ಜೊತೆ ಮಾತುಕತೆ~ ಕಾರ್ಯಕ್ರಮದಲ್ಲಿ ಹಣಕ್ಕಾಗಿ ಮತ ಹಾಕದಂತೆ ಜನರ ಮನವೊಲಿಸಬೇಕಾಗಿದೆ. ಜೊತೆಗೆ ಭ್ರಷ್ಟರು, ಸ್ವಜನಪಕ್ಷಪಾತಿಗಳು ಎಂದಿಗೂ ಚುನಾ ವಣೆಯಲ್ಲಿ ಗೆಲ್ಲದಂತೆ ಜಾಗೃತ ಮತದಾನ ಮಾಡುವಂತೆ  ಮತದಾರರಲ್ಲಿ ಮನವಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಕಳಸ ಹೋಬಳಿಯ ರಸ್ತೆಗಳ ಸ್ಥಿತಿ ಹದಗೆಟ್ಟಿದೆ ಮತ್ತು ಕಳೆದ ಮೂರು ವರ್ಷದಿಂದ ಯಾವುದೇ ವಸತಿ ಯೋಜನೆಯಲ್ಲಿ ಮನೆ ಬಿಡುಗಡೆಯಾಗಿಲ್ಲ ಎಂದು ಕೆ.ಸಿ.ಧರಣೇಂದ್ರ ಗಮನ ಸೆಳೆದರು. ಹಂತಹಂತವಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು ಎಂದು ಎನ್.ಎಂ.ಹರ್ಷ ಅಭಿಪ್ರಾಯಪಟ್ಟರು.

ರಾಜ್ಯ ಸಭೆ ಮಾಜಿ ಸದಸ್ಯೆ ಬಿಂಬಾರಾಯ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್, ಹೋಬಳಿ ಅಧ್ಯಕ್ಷ ವರ್ಧಮಾನಯ್ಯ, ಮುಖಂಡ ರಾದ ಮಾರ್ಟಿನ್ ಡಿಸೋಜ, ಶುಕೂರ್, ಫಾತಿಮಾ ರೆಹಮಾನ್, ಉಮಾದೇವಿ, ರಾಮಚಂದ್ರಯ್ಯ, ಗ್ರಾ.ಪಂ. ಸದಸ್ಯರಾದ ಅನಿಲ್ ಡಿಸೋಜ, ಶಾಹುಲ್, ರತ್ನಮ್ಮ ಶೆಟ್ಟಿ, ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT