ಕಳಸ: ಹೊರನಾಡಿನ ಜಿ.ಭೀಮೇಶ್ವರ ಜೋಷಿ ಅವರಿಗೆ `ಮಲೆನಾಡ ರತ್ನ' ಪ್ರಶಸ್ತಿ ನೀಡಿ ಇಲ್ಲಿನ ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರ ಪರವಾಗಿ ಗುರು ವಾರ ಪೌರ ಸನ್ಮಾನ ಮಾಡಲಾಯಿತು.
ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಭೀಮೇಶ್ವರ ಜೋಷಿ ಅವರಿಗೆ ಬೆಳ್ಳಿಯ ಕಿರೀಟ ಧಾರಣೆ ಮಾಡಿ `ಮಲೆನಾಡ ರತ್ನ' ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜೋಷಿ, ಜನರ ಪ್ರೀತಿ ಮತ್ತು ಅಭಿ ಮಾನ ಎಲ್ಲ ಪ್ರಶಸ್ತಿಗಳಿಗಿಂತ ದೊಡ್ಡದು. ತಮ್ಮ ಕುಟುಂಬದ ಹಿಂದಿನ ಸಂತತಿಯ ಹಿರಿಯರ ತ್ಯಾಗ, ಆದರ್ಶದಿಂದಾಗಿ ಕ್ಷೇತ್ರಕ್ಕೆ ಇಂದಿನ ಸ್ವರೂಪ ಬಂದಿದೆ ಎಂದು ವಿನಮ್ರತೆಯಿಂದ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ನಮ್ಮ ಹಿರಿಯರು ಕೂಡ ಮೆಚ್ಚುವಂತಹ ಸಾಧನೆ ಮಾಡಿದಾಗ ಮಾತ್ರ ನಾವು ಯಶಸ್ವಿ ವ್ಯಕ್ತಿಗಳಾಗುತ್ತೇವೆ. ಸಮಸ್ಯೆ, ಒತ್ತಡ, ಸೋಲುಗಳಿಗೆ ಅಂಜದೆ ಗಟ್ಟಿತನದ ನಿರ್ಧಾರ ತೆಗೆದುಕೊಳ್ಳುವ ಛಾತಿ ಇದ್ದರೆ ಮಾತ್ರ ನಾಯಕನಾಗಿ ಮುಂದುವರೆಯಬಹುದು. ಜೋಷಿ ಇದೇ ಕಾರಣಕ್ಕೆ ಜನಪ್ರಿಯರಾಗಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.