ADVERTISEMENT

ಮೂಡಿಗೆರೆ ಬಾಳೂರಲ್ಲಿ `ಕೈಲಾಶ್' ಚಿತ್ರೀಕರಣ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 10:51 IST
Last Updated 20 ಜುಲೈ 2013, 10:51 IST

ಮೂಡಿಗೆರೆ: ತಾಲ್ಲೂಕಿನ ಬಾಳೂರಿನಲ್ಲಿರುವ ಕಾಫಿ ಎಸ್ಟೆಟ್‌ವೊಂದರಲ್ಲಿ `ಕೈಲಾಶ್' ಚಿತ್ರದ ಚಿತ್ರೀಕರಣ ಕಳೆದ ಹತ್ತು ದಿನಗಳಿಂದ ನಡೆಯುತ್ತಿದೆ. ಚೊಚ್ಚಲ ನಿರ್ದೆಶಕ ಚನ್ನರಾಯ ಪಟ್ಟಣದ ಮಲ್ಲಿಕಾರ್ಜುನ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಶಿವಕುಮಾರ್ ಎಂಬುವವರು ನಿರ್ಮಿಸುತ್ತಿದ್ದು, ಸೃಜನ್ ಲೋಕೇಶ್ ನಾಯಕನಟರಾಗಿ ಮತ್ತು ಹೊಸ ಪರಿಚಯವಾದ ಪಾವನಾ ಎಂಬುವವರು ಚಿತ್ರದಲ್ಲಿ ನಟಿಯಾಗಿ ಅಭಿನಯಿಸುತ್ತಿದ್ದಾರೆ.

ಶುಕ್ರವಾರದಂದು ಗ್ರಾಮದ ಬಿ.ಎಸ್.ಮಂಜುನಾಥ್‌ಗೌಡ (ಬಾಳೂರು ಮನು) ಎಂಬುವವರ ಕಾಫಿ ತೋಟ, ಮನೆಯ ಸುತ್ತಮುತ್ತಲ ಪರಿಸರದಲ್ಲಿ ಚಿತ್ರೀಕರಣ ಸಾಗಿದ್ದು, ಮಲೆನಾಡಿನ ಪ್ರಕೃತಿಯ ತಾಣಗಳಾದ ಜಾವಳಿ ಗ್ರಾಮದ ಹೇಮಾವತಿ ಉಗಮ ಸ್ಥಳದಲ್ಲಿ ವಿವಾಹ ಕಾರ್ಯಕ್ರಮ, ಕಾಫಿ ಎಸ್ಟೇಟಿನ ಬಂಗಲೆಯಲ್ಲಿ ಆರತಕ್ಷತೆ ಕಾರ್ಯಕ್ರಮದ ದೃಶ್ಯಗಳನ್ನು ಸೆರೆಯಿಡಿಯಲಾಗಿದೆ.

ಬಾಳೂರು ಸುತ್ತಮುತ್ತಲೂ ನಿತ್ಯ ಮಳೆಯಾಗುತ್ತಿದ್ದು, ಚಿತ್ರದಲ್ಲಿನ ಮಳೆಯ ಸನ್ನಿವೇಶಕ್ಕೆ ಸಹಜ ದೃಶ್ಯ ಲಭ್ಯವಾಗುತ್ತಿದೆ. ಚಿತ್ರಕ್ಕೆ ಅಗತ್ಯವಾದ ನೃತ್ಯದ ದೃಶ್ಯಗಳು, ಚಿತ್ರದಲ್ಲಿ ಬರುವ ನಾಯಕ ನಟ ಮತ್ತು ನಟಿಯ ಗ್ರಾಮೀಣ ಪರಿಸರದಲ್ಲಿನ ಚಿತ್ರಣಗಳ ದೃಶ್ಯ, ಮಳೆಗಾಲದಲ್ಲಿನ ಮಲೆನಾಡಿನ ಸೊಬಗನ್ನು ಸೆರೆಯಿಡಿಯುವ ದೃಶ್ಯಗಳನ್ನು ಚಿತ್ರಿಕರಿಸಲಾಗುತ್ತಿದೆ.

ಮಳೆ ಬಿಡುವು ನೀಡಿದರೆ ಮಲೆನಾಡಿನ ಇನ್ನಷ್ಟು ಆಕರ್ಷಕ ಪರಿಸರವನ್ನು ಸೆರೆಯಿಡಿಯುವ ಉದ್ದೇಶವಿದ್ದು, ಅದಕ್ಕಾಗಿ ಇನ್ನೂ ನಾಲ್ಕು ದಿನಗಳ ಕಾಲ ಬಾಳೂರು ಸುತ್ತಮುತ್ತಲ ರದೇಶದಲ್ಲಿಯೇ ಚಿತ್ರಿಕರಣ ನಡೆಸುವುದಾಗಿ ನಿರ್ದೇಶಕ ಚನ್ನರಾಯಪಟ್ಟಣ ಮಲ್ಲಿಕಾರ್ಜುನ ತಿಳಿಸಿದರು.

ಕೈಲಾಶ್ ಚಿತ್ರದಲ್ಲಿ ಬರುವ ವಿವಾಹ ಕಾರ್ಯಕ್ರಮವನ್ನು ಗ್ರಾಮದಲ್ಲಿ ಚಿತ್ರಿಸಿರುವುದರಿಂದ ಗ್ರಾಮದ ಅನೇಕ ಯುವಕರು, ಗ್ರಾಮಸ್ಥರು ಮದುವೆ ಸಮಾರಂಭದಲ್ಲಿ ಭಾಗವಹಿಸುವ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಪ್ರಸಂಗಗಳಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಗ್ರಾಮಸ್ಥರು ಕೈಲಾಶ್ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಪುಳಕಿತಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.