ADVERTISEMENT

ಮೂಡಿಗೆರೆ: ಮರದ ದಿಮ್ಮಿ ಅಕ್ರಮ ಸಾಗಣೆ

ಇಬ್ಬರ ಬಂಧನ; ಒಬ್ಬ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 12:47 IST
Last Updated 14 ಡಿಸೆಂಬರ್ 2012, 12:47 IST

ಮೂಡಿಗೆರೆ: ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ವಾಹನವನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆದ ಘಟನೆ ತಾಲ್ಲೂಕಿನ ಗಾಂಧಿಘರ್ ಗ್ರಾಮದ ಹಾಲೂರಿನ ಸಮೀಪ ಗುರುವಾರ ಬೆಳಗಿನ ಜಾವ ನಡೆದಿದೆ.

ಮೂಡಿಗೆರೆ ಅರಣ್ಯ ಇಲಾಖೆಯ ಸಿಬ್ಬಂದಿ, ಗಸ್ತು ಕಾರ್ಯಾಚರಣೆ ನಡೆಸುವಾಗ, ಹಾಲೂರಿನ ಕಡೆ ಯಿಂದ ಬರುತ್ತಿದ್ದ ಮಹೇಂದ್ರ ಪಿಕ್‌ಅಪ್ ವಾಹನದಲ್ಲಿ ನಂದಿ ಜಾತಿಯ ಏಳು ಮತ್ತು ಹೆಬ್ಬಲಸಿನ ಜಾತಿಯ ಐದು ಮರದ ದಿಮ್ಮಿಗಳನ್ನು ಸಾಗಿಸಲಾಗುತ್ತಿತ್ತು. ವಾಹನ ತಡೆದು ತಪಾಸಣೆ ನಡೆಸಿದಾಗ, ಮರದ ದಿಮ್ಮಿಗಳನ್ನು ಹಾಲೂರಿನ ಸರ್ಕಾರಿ ಜಾಗದಿಂದ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದಲ್ಲಿದ್ದ  ಹಳಿಕೆ ಗ್ರಾಮದ ಸಿದ್ದೀಕ್, ಮುತ್ತಿಗೆಪುರ ಗ್ರಾಮದ ಪ್ರಕಾಶ್ ಎಂಬುವವರು ಬಂಧಿಸಲಾಗಿದೆ.ಮತ್ತೊಬ್ಬ ಆರೋಪಿ ಹಾಲೂರಿನ ರಘು ಎಂಬಾತ ನಾಪತ್ತೆಯಾಗಿದ್ದಾರೆ. ವಾಹನ ಮತ್ತು ಮರದ ದಿಮ್ಮಿಗಳನ್ನು ತಮ್ಮ ವಶಕ್ಕೆ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಕರಣ ದಾಖಲಿಸಿದ್ದಾರೆ.

ಉಪ ಅರಣ್ಯ ಸಂರಕ್ಷಕ ರಮೇಶ್ ಬಾಬು, ವಲಯ ಅರಣ್ಯಾಧಿಕಾರಿ ಸುದರ್ಶನ್ ಅವರ ಮಾರ್ಗದರ್ಶ ನದಲ್ಲಿ ನಡೆದ ಕಾರ್ಯಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಮಹಮ್ಮದ್ ಇಸ್ಮಾಯಿಲ್, ಡಿ.ಪಿ. ದಿನೇಶ್, ಅರಣ್ಯ ರಕ್ಷಕರಾದ ಏಕಾಂತಪ್ಪ, ಗಣೇಶ್, ರಂಗನಾಥ, ಸಂದೀಪ, ಚಾಲಕ ತಿಮ್ಮೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.