ADVERTISEMENT

ಮೆಣಸೆ: ರೈತಸಂಘ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 8:20 IST
Last Updated 2 ಮಾರ್ಚ್ 2012, 8:20 IST

ಶೃಂಗೇರಿ (ಕೊಪ್ಪ): ಭತ್ತ ಖರೀದಿ ಕೇಂದ್ರ ಮುಚ್ಚಿರುವುದನ್ನು ಆಕ್ಷೇಪಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬುಧವಾರ ಮೆಣಸೆಯಲ್ಲಿ ರಸ್ತೆ ತಡೆ ನಡೆಸಿ, ಖರೀದಿ ಕೇಂದ್ರ ಮುಂಭಾಗ ಧರಣಿ ನಡೆಸಿದರು.

ಮೆಣಸೆಯಲ್ಲಿ ಆರಂಭಿಸಿರುವ ಭತ್ತ ಖರೀದಿ ಕೇಂದ್ರ ಮುಚ್ಚಿರುವ ಬಗ್ಗೆ ಸೋಮವಾರ ರೈತಸಂಘ ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳು ಬುಧವಾರದಿಂದ ಖರೀದಿ ಆರಂಭಿಸುವ ಭರವಸೆ ನೀಡಿದ್ದರು. ಬುಧವಾರ ರೈತರು ಭತ್ತ ತುಂಬಿಕೊಂಡು ಖರೀದಿ ಕೇಂದ್ರಕ್ಕೆ ಬಂದಾಗ ಮುಚ್ಚಿರುವ ಬಾಗಿಲು ರೈತರ ಆಕ್ರೋಶಕ್ಕೆ ಕಾರಣವಾಯಿತು.
 
ಕೆಲ ರೈತರು ಇಂದಿನಿಂದ ಮತ್ತೆ ಭತ್ತ ಖರೀದಿ ಮಾಡುವುದಾಗಿ ತಿಳಿಸಿದ್ದ ಅಧಿಕಾರಿಗಳ ಮಾತಿನಂತೆ ಭತ್ತ ತಂದಾಗ ಖರೀದಿ ಕೇಂದ್ರ ಮುಚ್ಚಿತ್ತು. ಈ ಬಗ್ಗೆ ರೈತರಿಗೆ ಮಾಹಿತಿಯೂ ನೀಡದೆ ಭರವಸೆ ನೀಡಿದ್ದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೆ ಇರುವುದಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಚುನಾವಣಾ ಸಂಬಂಧಿ ಸಭೆಗೆ ಕೊಪ್ಪಕ್ಕೆ ತೆರಳಿದ್ದ ತಹಶೀಲ್ದಾರ್ ತಾಲ್ಲೂಕು ಕಚೇರಿ ಸಿಬ್ಬಂದಿಯನ್ನು ಕಳುಹಿಸಿದ್ದರು. ಆದರೆ ಖರೀದಿ ಕೇಂದ್ರ ತೆರೆಯುವ ಭರವಸೆಯೂ ದೊರಕದ ಹಿನ್ನೆಲೆಯಲ್ಲಿ ಶೃಂಗೇರಿ, ಜಯಪುರ ರಸ್ತೆ ತಡೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಎಸ್‌ಐ  ರಾಘವೇಂದ್ರ ರೈತರ ಮನವೊಲಿಸಿ ರಸ್ತೆ ತಡೆ ತೆರವುಗೊಳಿಸಿದರು.

ರಸ್ತೆ ತಡೆ ಹಿಂಪಡೆದ ರೈತ ಸಂಘ ಕಾರ್ಯಕರ್ತರು ಖರೀದಿ ಕೇಂದ್ರ ಮುಂಭಾಗ ಧರಣಿ ಕುಳಿತರು. ಈ ಸಂದರ್ಭದಲ್ಲಿ ಮಾತನಾಡಿದ ರೈತರು ಖರೀದಿ ಕೇಂದ್ರದ ಅವ್ಯವಸ್ಥೆ ಬಗ್ಗೆ ಅಕ್ರೋಶ ವ್ಯಕ್ತಪಡಿದರು. ಸಂಜೆ ವೇಳೆಗೆ ಅಧಿಕಾರಿಗಳು ಬಂದು ಮಾತುಕತೆ ನಡೆಸುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಖರೀದಿ ಕೇಂದ್ರದ ಎದುರು ಧರಣಿ ಮುಂದುವರಿಸಿದರು.
 
ಕುರಂದೂರು ಶ್ರೀನಿವಾಸ ಎಂಬವರು ಬೆಳಿಗ್ಗೆ ತೆಗೆದುಕೊಂಡು ಬಂದಿದ್ದ ಭತ್ತದ ಮೂಟೆಗಳನ್ನು ವಾಹನದಿಂದ ಇಳಿಸದೆ ಖರೀದಿ ಕೇಂದ್ರದೆದುರು ಕಾಯುತ್ತಿದ್ದರು. ರೈತ ಸಂಘ ಅಧ್ಯಕ್ಷ ಬಿ.ಎಸ್.ಶ್ರೀಧರರಾವ್, ಕಾರ್ಯದರ್ಶಿ ಚಂದ್ರಶೇಖರ್, ನಟರಾಜ್, ಪೂರ್ಣೇಶ್, ಅನಂತಯ್ಯ, ಚನ್ನಕೇಶವ, ಮಂಜುನಾಥ್, ಫಲ್ಗುಣ, ಪುಟ್ಟಪ್ಪಹೆಗ್ಡೆ, ಶ್ರೀನಿವಾಸಮೂರ್ತಿ, ಚಂದ್ರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.