ADVERTISEMENT

ಮೊಕದ್ದಮೆ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 9:15 IST
Last Updated 20 ಸೆಪ್ಟೆಂಬರ್ 2011, 9:15 IST

ಚಿಕ್ಕಮಗಳೂರು: ಸಾರಗೋಡು ಮೀಸಲು ಅರಣ್ಯ ಸಂತ್ರಸ್ತರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಹಿಂಪಡೆ ಯಬೇಕೆಂದು ರಾಜ್ಯ ರೈತ ಸಂಘ ಮತ್ತು ಸಣ್ಣ ಬೆಳೆಗಾರರ ಸಂಘ ಒತ್ತಾಯಿಸಿದೆ.

ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳ ಹೊಂದಾಣಿಕೆ ಕೊರತೆಯಿಂದ ಕಂದಾಯ ಇಲಾಖೆ ಜಮೀನಿನಲ್ಲಿ ಸರ್ಕಾರಿ ಆದೇಶದಂತೆ ಕಂದಾಯ ಜಮೀನನ್ನು ಅರಣ್ಯದಿಂದ ಬೇರ್ಪಡಿಸದೆ, ಈ ಕಂದಾಯ ಭೂಮಿಯಲ್ಲಿ ದಲಿತರು, ಬಡವರು, ಸಣ್ಣರೈತರು ನೂರಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೂ ಏಕಾಏಕಿ ಖುಲ್ಲಾಪಡಿಸಿ, ಒಕ್ಕಲಿಬ್ಬಿಸುವಾಗ ಸರ್ಕಾರದ ಗಮನ ಸೆಳೆಯಲು ಧರಣಿ ನಡೆಸಲಾಗಿತ್ತೆಂದು ಮುಖಂಡರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಾಂತಿಯುತ ಚಳವಳಿ ನಡೆಸಿದ್ದರಿಂದ 2006ರಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಕಂದಾಯ ಮತ್ತು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸರ್ಕಾರದ ಆದೇಶದಂತೆ 180ಕ್ಕೂ ಹೆಚ್ಚು ಕುಟುಂಬಗಳು ಇರುವ ಜಾಗ ಮೀಸಲು ಅರಣ್ಯ ಪ್ರದೇಶವಾಗಿರದೆ, ಕಂದಾಯ ಭೂಮಿ ಎಂದು ಗುರುತಿಸಲಾಗಿದೆ. ಉಳಿದ 78 ಕುಟುಂಬಗಳು ಮೀಸಲು ಅರಣ್ಯ ಪ್ರದೇಶದಲ್ಲಿ ಬಂದಿರು ವುದರಿಂದ ಅವರಿಗೆ ಸರ್ಕಾರದಿಂದ ಪುನರ್ವಸತಿ ಸೌಲಭ್ಯ ನೀಡಲಾಗಿದೆ ಎಂದಿದ್ದಾರೆ.

ಹಲವಾರು ವರ್ಷಗಳಿಂದ ವಾಸಿಸು ತ್ತಿರುವ ಜನರನ್ನು ಒಕ್ಕಲೆಬ್ಬಿಸದಂತೆ ನಡೆಸಿದ ಹೋರಾಟದಲ್ಲಿ 61 ಜನರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. ಈ ಮೊಕದ್ದಮೆಯಿಂದ ಸಂತ್ರಸ್ತರು ವೈಯಕ್ತಿಕವಾಗಿ ಹಲವು ತೊಂದರೆಗಳನ್ನು ಅನುಭವಿಸುವಂತಾಗಿದೆ. ಸರ್ಕಾರ ಕೂಡಲೇ ಅವರ ಮೇಲೆ ಹೂಡಿರುವ ಮೊಕದ್ದಮೆ ಹಿಂಪಡೆಯಬೇಕೆಂದು ಮನವಿ ಮಾಡಿದ್ದಾರೆ.

ಸರ್ಕಾರ ರಾಜ್ಯದಲ್ಲಿ ಪ್ರತಿಭಟನಾನಿರತ ಕೆಲವರ ಮೊಕದ್ದಮೆಗಳನ್ನು ಹಿಂಪಡೆದಿರು ವುದರಿಂದ ಸಾರಗೋಡು ಮೀಸಲು ಅರಣ್ಯವಾಸಿಗಳ ಮೇಲಿರುವ ಮೊಕದ್ದಮೆ ಯನ್ನು ಹಾಗೆಯೆ ಉಳಿಸಿಕೊಳ್ಳಲಾಗಿದೆ. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಈ ಮೊಕದ್ದಮೆಗಳನ್ನು ಹಿಂಪಡೆಯಬೇಕೆಂದು ಸಂಘಟನೆ ಅಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ಮತ್ತು ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.