ADVERTISEMENT

ರಾಜ್ಯಪಾಲರಿಗೆ ರೈತ ಸಂಘ ನಿಯೋಗ ಮನವಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 5:30 IST
Last Updated 23 ಫೆಬ್ರುವರಿ 2011, 5:30 IST

ಕೊಪ್ಪ: ಅಡಿಕೆ ಹಳದಿ ಎಲೆರೋಗದ ಕುರಿತು ಅಧ್ಯಯನ ಮಾಡಿರುವ ಕೇಂದ್ರ ತೋಟಗಾರಿಕಾ ಆಯುಕ್ತ ಡಾ. ಗೋರಕ್ ಸಿಂಗ್ ವರದಿಯನ್ನು ರಾಜ್ಯದ ಕೃಷಿ ವಿ.ವಿ. ಮೂಲಕ ಅನುಷ್ಠಾನಕ್ಕೆ ತರಲು ರಾಷ್ಟ್ರಪತಿಗಳನ್ನು ಕೋರುವುದಾಗಿ ರಾಜ್ಯಪಾಲ ಎಚ್.ಭಾರದ್ವಾಜ್ ತಿಳಿಸಿದ್ದಾರೆ.ಸೋಮವಾರ ಭೇಟಿ ಮಾಡಿದ ರೈತ ಸಂಘದ ನಿಯೋಗದ ಮನವಿ ಸ್ವೀಕರಿಸಿ ಅವರು ಮಾತನಾಡಿದರು. 

 ರೈತ ಸಂಘದ ನಿಯೋಗದಲ್ಲಿ ಕರುವಾನೆ ನವೀನ್, ನುಲುಗುಳಿ ನಾಗರಾಜ್, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ, ರೈತ ಸಂಘದ ಹಾಲೇಶಪ್ಪ ಗೌಡ, ಅಜಿತ, ಸ್ವೀಕೃತ ಹೆಗ್ಡೆ, ಸುರೇಶ್‌ಬಾಬು ಇದ್ದರು.ಕೇಂದ್ರ ಸರ್ಕಾರದ ಪರಿಸರ ಇಲಾಖೆ ಜ.30 ರಂದು ಹೊರಡಿಸಿದ ಸುಕ್ತೋಲೆ ಮತ್ತು ಹೈಕೋರ್ಟ್‌ನಿಂದ ಪ್ಲಾಸ್ಟಿಕ್ ಬಳಸಬಾರದೆಂಬ ಅದೇಶ ಹೊರಬಿದ್ದ ದಿನದಿಂದ ಉತ್ಪಾದಕರು, ಖರೀದಿದಾರರು, ಸಗಟು ಮಾರಾಟದಾರರು ಖರೀದಿ ನಿಲ್ಲಿಸಿದ್ದರಿಂದ ಮಾರುಕಟ್ಟೆಯಲ್ಲಿ ಕೊಳ್ಳುವವರಿಲ್ಲದೆ ಅಡಿಕೆ ಬೆಲೆ ಕುಸಿಯುತ್ತಿದೆ. ಈ ವಿಷಯದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಿ ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿ ಪ್ರಧಾನ ಮಂತ್ರಿಗಳ ಮೂಲಕ ಪರ್ಯಾಯ ಮಾರ್ಗ ಸೂಚಿಸಿ ಹೈಕೋರ್ಟ್ ಹೊರಡಿಸಿದ ಆಜ್ಞೆಗೆ ತಡೆ ನೀಡಬೇಕೆಂದು ಒತ್ತಾಯಿಸಲಾಯಿತು. ಈ ಬಗ್ಗೆ ಕೂಡಲೇ ರಾಷ್ಟ್ರಪತಿಗೆ ಕೋರುವುದಾಗಿ ರಾಜ್ಯಪಾಲರು ತಿಳಿಸಿದರು.

ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಶಿವಮೊಗ್ಗ ಭಾಗದಲ್ಲಿ ಮತ್ತು ಮಲೆನಾಡಿನಲ್ಲಿ ಅಡಿಕೆಗೆ ಎಲೆ ಹಳದಿ ರೋಗ ಮಾರಕವಾಗಿದ್ದು, ಕೇಂದ್ರ ಸರ್ಕಾರ ಈ ರೋಗ ಬಾಧೆ ತುತ್ತಾದ ಪ್ರದೇಶಗಳ ಸಮಸ್ಯೆ ಕಂಡು ಹಿಡಿಯಲು ತೋಟಗಾರಿಕಾ ಆಯುಕ್ತ ಡಾ. ಗೋರಕ್‌ಸಿಂಗ್ ನೀಡಿದ್ದ ಪರಿಹಾರ ಸೂತ್ರಗಳನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ನಿಯೋಗ ರಾಜ್ಯಪಾಲರನ್ನು ಒತ್ತಾಯಿಸಿತು.

ಎಲ್ಲಾ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಪರಿಸರ ಮಾಲಿನ್ಯ ಇಲಾಖೆಯ ಮಂತ್ರಿಗಳಿಗೆ ಮನವರಿಕೆ ಮಾಡಲು ಮತ್ತು ಪ್ರಧಾನ ಮಂತ್ರಿಗಳ ಮಧ್ಯ ಪ್ರವೇಶಿಸುವುದಕ್ಕೆ ಒತ್ತಾಯಿಸಲು ಅಡಿಕೆ ಬೆಳೆಗಾರರ ರೈತರ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಲು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ ಅಡಿಕೆ ಬೆಳೆಗಾರರ ಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.