ADVERTISEMENT

ರಾಜ್ಯ ಹೆದ್ದಾರಿಗೆ ಮರು ಡಾಂಬರೀಕರಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 9:50 IST
Last Updated 8 ಫೆಬ್ರುವರಿ 2011, 9:50 IST

ಚಿಕ್ಕಮಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ರಾಮಗಳ ಅಭಿವೃದ್ಧಿ ಕೆಲಸಗಳು ಉತ್ತಮ ಗುಣಮಟ್ಟ ದಲ್ಲಿ ಆಗುತ್ತಿವೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು.ತಾಲ್ಲೂಕಿನ ಕರ್ತಿಕೆರೆ ಗ್ರಾಮದಲ್ಲಿ ರಾಜ್ಯ ಹೆದ್ದಾರಿಗೆ ಮರು ಡಾಂಬರೀಕರಣ ಮಾಡುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಪಕ್ಷದ ಕಾರ್ಯಕರ್ತರು ಉತ್ತಮ ಸಂಘಟನೆ ಮಾಡಿ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವ ಸಾಧಿಸಲು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.

ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನವನ್ನು ಬಳಸಿ ಎಲ್ಲ ಗ್ರಾಮಗಳೀಗೂ ಶಾಶ್ವತ ಕೆಲಸ ಆಗುವಂತೆ ಮಾಡಲು ಶ್ರಮಿಸುತ್ತೇನೆ. ಸರ್ಕಾರ ಲಕ್ಷಾಂತರ ರೂ ವ್ಯಯಿಸಿ ಕಾಮಗಾರಿಗಳನ್ನು ನಿರ್ವಹಿಸುತ್ತದೆ. ಅಧಿಕಾರಿಗಳು ಮತ್ತು ಸ್ಥಳೀಯ ಕಾಯಕರ್ತರು ಗುಣಮಟ್ಟದ ಕೆಲಸ ಆಗುವಂತೆ ಗಮನಹರಿಸಬೇಕೆಂದು ಅವರು ಕರೆ ನೀಡಿದರು.
ಮುಖಂಡರಾದ ಕವೀಶ್, ರಾಜು, ಬೀರೇಗೌಡ, ರವಿ, ಧರ್ಮೇಶ್, ತಿರುಮಲರಾಜ್ ಅರಸ್ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಾದ ಮದೇಗೌಡ, ಬಸವರಾಜ್ ಇದ್ದರು.‘ಜನಗಣತಿ ನಿಮಗೆಷ್ಟು ಗೊತ್ತು’

ಶೃಂಗೇರಿ : ಇಲ್ಲಿನ ಜಗದ್ಗುರು ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯಲ್ಲಿ ಶುಕ್ರವಾರ ‘ಭಾರತದ ಜನಗಣತಿ 2011 ನಿಮಗೆಷ್ಟು ಗೊತ್ತು’ಕಾರ್ಯಕ್ರಮವನ್ನು ನವದೆಹಲಿ ಭಾರತೀಯ ಜನಗಣತಿ ಆಯೋಗದ ಆಯುಕ್ತರ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶೃಂಗೇರಿ  ಆದೇಶಾನುಸಾರ ನಡೆಸಲಾಯಿತು. ಕಾರ್ಯಕ್ರಮದ ಉಪನ್ಯಾಸಕರಾಗಿ ಶಾಲೆಯ ಕನ್ನಡ ಶಿಕ್ಷಕ ದ. ರಾಜಣ್ಣ ಮಾತನಾಡಿ ಭಾರತದ ಜನಗಣತಿ ಜಗತ್ತಿನಲ್ಲಿ ಅತ್ಯಂತ ಮುಖ್ಯವಾದದ್ದು. ಈ ಗಣತಿ 1872 ರಲ್ಲಿ ಮೊದಲಿಗೆ ಆರಂಭವಾಗಿ ಆಯ್ದ ಕೆಲವು ಪ್ರಾಂತಗಳಲ್ಲಿ ನಡೆದು 1981 ರಲ್ಲಿ ಸಾರ್ವ ತ್ರಿಕವಾಗಿ ನಡೆಯಿತು. ಇಲ್ಲಿಯವರೆಗೆ 15 ಬಾರಿ ಗಣತಿ ಕಾರ್ಯ ನಡೆದಿದ್ದು ಸ್ವಾತಂತ್ರ್ಯ ನಂತರ 7ನೇ ಜನಗಣತಿ ಎಂದು ತಿಳಿಸಿದರು.

ಭಾರತದ ಗಡಿ, ಜನ, ಭೂ ಪ್ರದೇಶ, ರಾಜಕೀಯ ಮತ್ತು ಸಾಮಾಜಿಕ ಸ್ಥಾನಮಾನ ಗಳನ್ನು ಇದು ನಿರ್ಧರಿಸುತ್ತದೆ. ಇದೇ ಫೆ. 9 ರಿಂದ 25 ರವರೆಗೆ ನಡೆಯುವ ಈ ರಾಷ್ಟ್ರ ಕಾರ್ಯದಲ್ಲಿ ಸರಿಯಾದ ಮಾಹಿತಿ ನೀಡಿ ಸಹಕರಿಸಿರಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ 8ನೇ ತರಗತಿ ವಿದ್ಯಾ ರ್ಥಿಗಳಿಗೆ ಆಂಗ್ಲ ಭಾಷೆಯಲ್ಲಿ ಜನಗಣತಿಯ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ರಂಜಿತ, ಶ್ರೀವಿದ್ಯಾ, ಶಿವಕುಮಾರ್, ಪ್ರಜ್ವಲ್ ಮತ್ತು ಕಿರಣ ನೇತೃತ್ವದ 5 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಸ್ಪರ್ಧೆಯಲ್ಲಿ ಕಿರಣ್ ತಂಡ ಪ್ರಥಮ ಬಹುಮಾನ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.