ADVERTISEMENT

ರೂ 40 ಲಕ್ಷದಲ್ಲಿ ಯಾತ್ರಿನಿವಾಸ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 8:42 IST
Last Updated 19 ಸೆಪ್ಟೆಂಬರ್ 2013, 8:42 IST
ಕಡೂರು ತಾಲ್ಲೂಕು ಅಂತರಗಟ್ಟೆಯ ದುರ್ಗಾಂಬಾ ದೇವಾಲಯಕ್ಕೆ ಬುಧವಾರ ಭೆೇಟಿ ನೀಡಿದ ಜಿಲ್ಲಾಧಿಕಾರಿ ಬಿ.ಶೇಖರಪ್ಪ ಯಾತ್ರಿನಿವಾಸ ನಿರ್ಮಾಣ ಕುರಿತು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಹಶೀಲ್ದಾರ್‌ ಶಾರದಾಂಬಾ ಇದ್ದರು
ಕಡೂರು ತಾಲ್ಲೂಕು ಅಂತರಗಟ್ಟೆಯ ದುರ್ಗಾಂಬಾ ದೇವಾಲಯಕ್ಕೆ ಬುಧವಾರ ಭೆೇಟಿ ನೀಡಿದ ಜಿಲ್ಲಾಧಿಕಾರಿ ಬಿ.ಶೇಖರಪ್ಪ ಯಾತ್ರಿನಿವಾಸ ನಿರ್ಮಾಣ ಕುರಿತು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಹಶೀಲ್ದಾರ್‌ ಶಾರದಾಂಬಾ ಇದ್ದರು   

ಕಡೂರು: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಅಂತರಗಟ್ಟೆಯ ದುರ್ಗಾಂಬಾ ದೇವಾಲಯಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ 40ಲಕ್ಷ ರೂ ವೆಚ್ಚದಲ್ಲಿ ಯಾತ್ರಿನಿವಾಸ ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಶೇಖರಪ್ಪ ತಿಳಿಸಿದರು.

ತಾಲ್ಲೂಕಿನ ಅಂತರಗಟ್ಟೆ ಗ್ರಾಮದ ದುರ್ಗಾಂಬಾ ದೇವಾಲಯಕ್ಕೆ ಬುಧವಾರ ಭೇಟಿ ನೀಡಿ ನಿರ್ಮಿತಿ ಕೇಂದ್ರಕ್ಕೆ ಯಾತ್ರಿನಿವಾಸ ನಿರ್ಮಾಣ­ಕ್ಕಾಗಿ 20ಗುಂಟೆ ಭೂಮಿ ಹಸ್ತಾಂ­ತರಿಸಿ ಅವರು ಮಾತನಾಡಿದರು. ಮುಜರಾಯಿ ಇಲಾಖೆಗೆ ಸೇರಿದ ದೇವಾಲ­ಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ಅವರ ಅನುಕೂಲಕ್ಕಾಗಿ ದೇವಾಲಯದ ಪಕ್ಕದ­ಲ್ಲಿರುವ ಸ್ಥಳದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಯಾತ್ರಿನಿವಾಸ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಾರ್ಷಿಕ 12ಲಕ್ಷ ರೂ ಆದಾಯವಿರುವ ದೇವಾಲಯಕ್ಕೆ ಸಂಬಂಧಿಸಿದ ಖಾಲಿ ಜಾಗ ಬಸ್‌ನಿಲ್ದಾಣದ ಸಮೀಪ ಇದ್ದು ಅಲ್ಲಿ ದೇವಾಲಯಕ್ಕೆ ಶಾಶ್ವತ ಆದಾಯ ಬರುವ ನಿಟ್ಟಿನಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿಕೊಡಬೇಕು ಮತ್ತು ಮುಜರಾಯಿ ಇಲಾಖೆ ವತಿಯಿಂದ ದೇವಾಲಯ ಅಭಿವೃದ್ಧಿಗೆ ಬಿಡುಗಡೆ ಆಗಿರುವ 1ಕೋಟಿ ರೂ ಹಣದಲ್ಲಿ ಬಹುದಿನಗಳ ಬೇಡಿಕೆಯಾಗಿರುವ ಸಾರ್ವಜನಿಕ ಸಮುದಾಯ ಭವನ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು ಎಂಬ ದೇವಾಲಯ ಸಮಿತಿ ಅಧ್ಯಕ್ಷ ಪರಮೇಶ್ವರಪ್ಪ ಅವರ ಮನವಿಗೆ ಅಂದಾಜು ಪಟ್ಟಿ ತಯಾರಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಿ­ದರು.

ಪುರಾತತ್ವ ಇಲಾಖೆ ವತಿಯಿಂದಲೂ ದೇವಾಲಯದ ಅಭಿವೃದ್ಧಿಗೆ ಅನುದಾನ ಕೊಡಿ­ಸಲು ಯತ್ನಿಸುವುದಾಗಿ ಭರವಸೆ ನೀಡಿದರು. ಅಂತರಗಟ್ಟೆ ಭೇಟಿ ಬಳಿಕ ಸಮೀಪದ ಆಸಂದಿಯ ಐತಿಹಾಸಿಕ ಈಶ್ವರ ದೇವಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ದೇವಾ­ಲಯ ಸಮರ್ಪಕವಾಗಿ ನಿರ್ವಹಿಸಲ್ಪಡದೆ ಇರುವುದು ಮತ್ತು ಬೀಡಾಡಿಗಳ ತಾಣವಾಗಿ­ದ್ದುದನ್ನು ಕಂಡು ಅಸಹನೆ ವ್ಯಕ್ತಪಡಿಸಿ ನಮ್ಮ ಇತಿಹಾಸ ಮತ್ತು ಪರಂಪರೆಗಳನ್ನು ಸಾರುವ ಐತಿಹಾಸಿಕ ಕುರುಹುಗಳ ಬಗೆಗಿನ ಪ್ರಜೆಗಳ ಅಸಡ್ಡೆ ತೊಲಗಬೇಕು, ಪುರಾತತ್ವ ಇಲಾಖೆ ವತಿಯಿಂದ ದೇವಾಲಯದ ಸಂರಕ್ಷಣೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ ಶಾರದಾಂಬಾ ಅವರಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಭೇಟಿ ಸಮಯದಲ್ಲಿ ತಹಶೀ­ಲ್ದಾರ್‌ ಶಾರದಾಂಬಾ, ನಿರ್ಮಿತಿ ಕೇಂದ್ರದ ಎಂಜಿನಿ­ಯರ್‌ ರಾಮಕೃಷ್ಣ, ಅಂತರಗಟ್ಟೆ ಗ್ರಾ.­ಪಂ. ಅಧ್ಯಕ್ಷ, ಸದಸ್ಯರು ಗ್ರಾಮಸ್ಥರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.