ADVERTISEMENT

ರೈತಕೂಟ ರೈತರ ಮಧ್ಯವರ್ತಿಯಾಗಲಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 10:40 IST
Last Updated 9 ಫೆಬ್ರುವರಿ 2011, 10:40 IST

ಕಮಲಾಪುರ (ಎನ್.ಆರ್.ಪುರ): ರೈತ ಕೂಟಗಳು ಸಹಕಾರ ಸಂಘಗಳು ಮತ್ತು ರೈತರ ನಡುವೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು  ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಡಿ.ಸಿ.ದೇವರಾಜ್ ಸಲಹೆ ನೀಡಿದರು.ತಾಲ್ಲೂಕಿನ ಕಮಲಾಪುರ ಗ್ರಾಮದಲ್ಲಿ ಮಂಗಳವಾರ ನಬಾರ್ಡ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಸೀತೂರು ಆಶ್ರಯದಲ್ಲಿ ನಡೆದ ಸರ್ವೋದಯ ರೈತಕೂಟ ಉದ್ಘಾ ಟಿಸಿ ಅವರು ಮಾತನಾಡಿದರು.

ರೈತಕೂಟದ ಕಲ್ಪನೆ ವಿಸ್ತಾರವಾಗಿದ್ದು ಗ್ರಾಮೀಣಾಭಿವೃದ್ಧಿ ದೃಷ್ಟಿಯಿಂದ ನಬಾರ್ಡ್ ಇದನ್ನು ಹುಟ್ಟುಹಾಕಿದೆ. ರೈತರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು, ಗ್ರಾಮೀಣಾಭಿವೃದ್ಧಿ, ರಸ್ತೆ, ಕೃಷಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಚರ್ಚಿಸಲು ರೈತ ಕೂಟ ಸಹಾಯಕವಾಗಲಿದೆ. ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ 125 ಕೋಟಿ ಸಾಲ ವಿತರಿಸಲಾಗಿದೆ. ಸ್ವಸಹಾಯ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ 96 ಕೋಟಿ ಸಾಲ ನೀಡಲಾಗಿದೆ ಸ್ವಸಹಾಯ ಸಂಘಗಳು 28 ಕೋಟಿ ಉಳಿತಾಯ ಮಾಡಿವೆ. ತಾಂತ್ರಿಕವಾಗಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಬೆಳೆ ಬೆಳೆಯಲು ಪ್ರಯತ್ನಿಸಬೇಕು ಎಂದರು.

ನಬಾರ್ಡ್‌ನ ಎಜಿಎಂ ದಿವಾಕರಹೆಗ್ಡೆ ಮಾತನಾಡಿ, ಸೀಮಿತ ಆಶಯದ ಕಲ್ಪನೆಯೊಂದಿಗೆ 1982ರಲ್ಲಿ ನಬಾರ್ಡ್ ರೈತ ಕೂಟ ಸ್ಥಾಪಿಸಲಾಯಿತು. ರೈತರಿಗೆ ಅರಿವು, ಮಾಹಿತಿ, ತಂತ್ರಜ್ಞಾನ ಸಾಮರ್ಥ್ಯ ಅಭಿವೃದ್ಧಿ ರೈತ ಕೂಟದ ಗುರಿಯಾಗಿರ ಬೇಕು. ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ ಇಂದಿಗೂ ಸಹ ಶೇ 51ರಷ್ಟು ರೈತರು ಬ್ಯಾಂಕುಗಳಿಂದ ಸಾಲ ಪಡೆಯುತ್ತಿಲ್ಲ ಜಿಲ್ಲೆಯಲ್ಲೂ ಇದೇ ಸ್ಥಿತಿ ಇದೆ. ಶೀಘ್ರದಲ್ಲೆ ತಾಲ್ಲೂಕಿನ ವ್ಯಾಪ್ತಿಯಲ್ಲಿ 100 ಜಂಟಿ ಬಾಧ್ಯತ ಗುಂಪುಗಳನ್ನು ಸ್ಥಾಪಿಸಲಾಗುವುದು. ರೈತ ಕೂಟಕ್ಕೆ ನಬಾರ್ಡ್‌ವತಿಯಿಂದ 3 ವರ್ಷ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.

ಲೀಡ್ ಡಿಸ್ಟಿಕ್ ಮ್ಯಾನೇಜರ್ ಅರುಣ್ ಕುಲಕರ್ಣಿ  ಬ್ಯಾಂಕ್ ಮತ್ತು ರೈತರ ನಡುವೆ ಅಂತರ ಜಾಸ್ತಿಯಾಗಿದ್ದು ರೈತ ಕೂಟಗಳು ಈ ಅಂತರವನ್ನು ಕಡಿಮೆ ಮಾಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಸೀತೂರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ಮಾತನಾಡಿದರು. ನಿಯೋಜಿತ ಮುಖ್ಯ ಸ್ವಯಂ ಸೇವಕ ಎ.ಎಸ್.ವೆಂಕಟರಮಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎಂ.ಶ್ರೀಧರ್, ಸೀತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಎನ್.ಪಿ.ರಮೇಶ್, ಎನ್.ಎಂ.ಬಾಬು ಪೂಜಾರಿ, ಬಿ.ಜಿ.ವೀಣಾ ಶ್ರೀಧರ್, ಕೆ.ವಿ.ರಜನಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಎಸ್.ಗಣೇಶ್, ನಿರ್ದೇಶಕರಾದ ಎಚ್.ಎ.ಶ್ರೀನಿವಾಸ, ಎಚ್.ಇ.ಮಹೇಶ್, ಎಸ್.ಸಿ.ಕೊಲ್ಲೇಗೌಡ, ವೈ.ಜಿ.ವಿಜಯೇಂದ್ರ, ಬಿ.ಎಂ.ರಘು, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಚ್.ಡಿ.ರಮೇಶ್, ಸಹಾಯಕ ಕೃಷಿ ನಿರ್ದೇಶಕ ಓಂಕಾರಪ್ಪ ಇದ್ದರು. ಅಮೃತ ಮತ್ತುತಂಡ, ವಿಜೇಂದ್ರ, ಅನಿಲ್‌ಕುಮಾರ್, ವೈ.ಎಸ್. ನಾರಾಯಣಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.