ADVERTISEMENT

ವಿವೇಕಾನಂದರ ಆದರ್ಶ ಅನುಕರಣೀಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 5:45 IST
Last Updated 13 ಜನವರಿ 2012, 5:45 IST

ನರಸಿಂಹರಾಜಪುರ: ಯುವಜನಾಂಗ ಸಾಧನೆ ಮಾಡಲು ಸ್ವಾಮಿ ವಿವೇಕಾನಂದರ ಚಿಂತನೆ ಅನುಕರಣೀಯವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ಎಚ್.ಎಚ್.ಜಲೇಂದ್ರ ತಿಳಿಸಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜ ನೆಯ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಯುವ ಜನಾಂಗ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡು, ಯಶಸ್ವಿ ಜೀವನ ನಡೆಸಲು ಅವರ ಆಧ್ಯಾತ್ಮಿಕ ಶಕ್ತಿ ನಡೆದು ಬಂದ ದಾರಿ ಬೆಳಕನ್ನು ನೀಡುತ್ತದೆ. ಯಾವುದೇ ಧರ್ಮ ಮೇಲಲ್ಲ, ಕೀಳಲ್ಲ ಎಲ್ಲಾ ಧರ್ಮಗಳು ಒಂದೇ ಎಂಬ ಅವರ ಆದರ್ಶ ಅಳವಡಿಸಿ ಕೊಂಡರೆ ಜಾತಿ, ಧರ್ಮಗಳ ನಡುವೆ ನಡೆಯುವ ಸಂಘರ್ಷ ಕೊನೆಗೊಂಡು ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಉಮೇಶ್ ಮಾತನಾಡಿ, ಸ್ವಾಮಿ ವಿವೇಕಾನಂದರು ಸಾಮಾನ್ಯ ಮನುಷ್ಯನಾಗಿದ್ದರೂ ದೇಶಕ್ಕೆ ರಚನಾತ್ಮಕ ಶಕ್ತಿ ಕೊಡುವ ಯೋಚನೆ ಹೊಂದಿದ್ದರು. ಯುವಶಕ್ತಿ ದೇಶವನ್ನು ನಿರ್ಮಾಣ ಮಾಬಹುದು. ಯುವ ಶಕ್ತಿಯನ್ನು ವಿದ್ವಂಸಕ ಕೃತ್ಯದಿಂದ ಉತ್ತಮ ಕಾರ್ಯದೆಡೆಗೆ ಆಕರ್ಷಿಸ ಬೇಕಾದರೆ ಸಕಾರಾತ್ಮಕ ಚಿಂತನೆ ಅವಶ್ಯಕ ಎಂದು ವಿವೇಕಾನಂದರು ಭಾವಿಸಿದ್ದರು.

ಯುವ ಜನಾಂಗದಲ್ಲಿ  ಉತ್ತಮ ಮೌಲ್ಯಗಳನ್ನು ತುಂಬುತ್ತಾ ಹೋದರೆ ಅದನ್ನು ಹಿರಿ ಕೊಳ್ಳುವ ಶಕ್ತಿ ಅವರಿಗಿದ್ದು ಸಕಾರಾತ್ಮಕ ಕಾರ್ಯಗಳತ್ತ ಅವರು ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ. ಯುವ ಶಕ್ತಿಯನ್ನು ದೇಶದ ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸ್ವಾಮಿ ವಿವೇಕಾನಂದರ ಚಿಂತನೆಯಾಗಿತ್ತು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆ ಮುಖ್ಯಸ್ಥ ಮುಜೀಬ್‌ಖಾನ್, ಸ್ವಾಮಿ ವಿವೇಕಾನಂದರು ವಿಶ್ವನಾಯಕರಾಗಿದ್ದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶು ಪಾಲ ಕೆ.ಮದನಗಿರಿಯಪ್ಪ ವಹಿಸಿ ಮಾತನಾಡಿದರು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಪೂರ್ಣೇಶ್, ಭೂಮಿಕ ಮತ್ತು ತಂಡ, ವಿಲ್ಸನ್, ಕೃಷ್ಣಪ್ರಸಾದ್,ರಂಜಿತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.