ADVERTISEMENT

ವಿಶ್ವಕರ್ಮ ಸಮುದಾಯಕ್ಕೆ ಸೌಲಭ್ಯ: ಮನವಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 7:55 IST
Last Updated 13 ಫೆಬ್ರುವರಿ 2012, 7:55 IST

ಮೂಡಿಗೆರೆ: ವಿಶ್ವಕರ್ಮ ಸಮಾಜದ ಕುಶಲ ಕರ್ಮಿಗಳಿಗೆ ಕಡಿಮೆ ಬಡ್ಡಿದರ ಸಾಲ, ನಿವೇಶನ ಸೌಲಭ್ಯಕ್ಕಾಗಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದ್ದು, ಈಡೇರಿಸುವ ಭರವಸೆ ಲಭಿಸಿದೆ ಎಂದು ಮಂಗಳೂರಿನ  ಎಸ್.ವಿ.ಆಚಾರ್ಯ ಹೇಳಿದರು. 

 ದಕ್ಷಿಣ ಕನ್ನಡ ವಿಶ್ವಕರ್ಮ ಬ್ರಾಹ್ಮಣ ಸಂಘ ಮತ್ತು ವಿಶ್ವಕರ್ಮ ಬ್ರಾಹ್ಮಣ ಟ್ರಸ್ಟ್ ವತಿಯಿಂದ ಮೂಡಿಗೆರೆ ವಿಶ್ವಕರ್ಮ ಬ್ರಾಹ್ಮಣ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವೈಶ್ವಕರ್ಮಣ ಮಹಾ ಯಜ್ಞ ಪೂಜೆ ಮತ್ತು ಸಾಮೂಹಿಕ ಉಪನಯನ ಸಂಸ್ಕಾರ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಟಿ.ರತ್ನಾಕರ್ ಪುರೋಹಿತ್ ಮಾತನಾಡಿ, ಧರ್ಮವನ್ನು ನಾವು ರಕ್ಷಿಸಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ. ದೇಹದ ಕೊಳೆ ತೆಗೆದು ಆತ್ಮದೊಳಗಿನ ಕೊಳೆಯನ್ನು ತೆಗೆಯದ ಹೊರತು ವ್ಯಕ್ತಿ ಪರಿಪೂರ್ಣನಲ್ಲ. ಸತ್ಯ ಧರ್ಮ ಮಾರ್ಗದಲ್ಲಿ ನಡೆದ ವಿಶ್ವಕರ್ಮ ಧರ್ಮವನ್ನು ಉಳಿಸಿ ಬೆಳೆಸಬೇಕೆಂದು ತಿಳಿಸಿದರು. ವಿಶ್ವಕರ್ಮ ಬ್ರಾಹ್ಮಣ ಟ್ರಸ್ಟ್‌ನ ಅಧ್ಯಕ್ಷ ಎಂ.ವಾದಿರಾಜ ಆಚಾರ್ಯ ಮಾತನಾಡಿ, ರಾಜಕಾರಣದಲ್ಲಿ ಎಲ್ಲಾ ಜಾತಿಗೆ ಮೀಸ ಲಾತಿ ನೀಡಿದ್ದಾರೆ. ಆದರೆ ವಿಶ್ವಕರ್ಮ ಜನಾಂಗದ ಯಾವುದೆ ವ್ಯಕ್ತಿಗೆ ವಿಧಾನಪರಿಷತ್ತಿನಲ್ಲಿ ಸ್ಥಾನ ನೀಡದೆ ನಿರ್ಲಕ್ಷಿಸಲಾಗಿದೆ. ಆದ್ದರಿಂದ ಸಮಾಜದ ಬಾಂಧವರು ರಾಜಕೀಯವಾಗಿ ಪ್ರಬಲರಾದರೆ ಮಾತ್ರ ಜನಾಂಗದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು. 

 ಜಗತ್ತಿಗೆ ಸಂಸ್ಕೃತಿ ಶ್ರೀಮಂತಿಕೆ ಹಂಚಿದ ದೇಶ ನಮ್ಮದು ಎಂದು ಪ್ರಾಧ್ಯಾಪಕ ಬೈಕಾಡಿ ಜನಾರ್ದನ ಆಚಾರ್ಯ ಹೇಳಿದರು.

ಮನೆಯ ಕಪಾಟಿನಲ್ಲಿ ಐಷಾರಾಮಿ ಆಟಿಕೆಗಳನ್ನು ಇಡುವ ಬದಲು ಉತ್ತಮ ಪುಸ್ತಕ ಸಂಗ್ರಹ ಮಾಡಿದರೆ ಮಕ್ಕಳು ಸಂಸ್ಕಾರವಂತರಾಗುತ್ತಾರೆ. ಅಂಕಗಳಿಸುವ ಕಾರ್ಖಾನೆಯಂತೆ ಮಕ್ಕಳನ್ನು ಬೆಳೆಸ ಬಾರದು.

ಪ್ರತಿಯೊಂದು ಮಗುವಿಗೂ ಅದರದ್ದೆ ಆದ ಪ್ರತಿಭೆ ಇರುತ್ತದೆ. ಒತ್ತಡ ಹೇರುವ ಮೂಲಕ ಅವರ ಸೃಜನಶೀಲತೆಯನ್ನು ಪೋಷಕರು ಮುರಿಯು ಕೆಲಸ ಮಾಡುತ್ತಿದ್ದಾರೆ. ಇದರಿಂದ ಮಕ್ಕಳು ಭಾವನೆಗಳಿಲ್ಲದೆ ಬೆಳೆಯುತ್ತಿದ್ದಾರೆ. ವಿವೇಕಾನಂದರ ನುಡಿಯಂತೆ ಮೊದಲು ನಾವು ನಮ್ಮನ್ನು ಅರಿತುಕೊಳ್ಳಬೇಕು. ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ಕೆಲಸ ನಮ್ಮಿಂದಾಗಬೇಕು ಎಂದರು.  

 ಮೂಡಿಗೆರೆ ವಿಶ್ವಕರ್ಮ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಆರ್.ರಮೇಶ್ ಆಚಾರ್ಯ ಅಧ್ಯಕ್ಷತೆವಹಿಸಿದ್ದರು. ಸಂಘದ ಮಹಿಳಾ ಅಧ್ಯಕ್ಷೆ ವಿನೋದಾ ಹರೀಶ್, ಕಾರ್ಯದರ್ಶಿ ವಿಶು ಕುಮಾರ್, ರೂಡಾಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.