ADVERTISEMENT

ಸತೀಶ್‌ಗೆ ಭಾವಪೂರ್ಣ ವಿದಾಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 10:15 IST
Last Updated 21 ಅಕ್ಟೋಬರ್ 2011, 10:15 IST

ಕಡೂರು: ಅಗಲಿದ ಸರಸ್ಪತಿಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಕೆ.ಆರ್.ಸತೀಶ್ ಅವರ ಅಂತ್ಯಕ್ರಿಯೆ ಸಾವಿರಾರು ಜನರ ಸಮ್ಮುಖದಲ್ಲಿ ಗುರುವಾರ ಮಧ್ಯಾಹ್ನ 4 ಗಂಟೆಗೆ ಪಟ್ಟಣದ ಹೊರವಲಯದವ ಕುಂಬಾರ ಗಂಡಿ ತೋಟದಲ್ಲಿ ನಡೆಯಿತು.

ಬುಧವಾರ ರಾತ್ರಿ ಬೆಂಗಳೂರಿನಿಂದ ಬಂದ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಪಟ್ಟಣದ ಸರ್ಕಾರಿ ಪಿಯು ಕಾಲೇಜು ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆವರೆಗೂ ಇಡಲಾಗಿತ್ತು. ಮೊದಲ ಬಸ್‌ಗಳಲ್ಲಿಯೇ ಪಟ್ಟಣಕ್ಕೆ ಆಗಮಿಸಿದ ಹಳ್ಳಿಗರು ಅಂತಿಮ ದರ್ಶನ ಪಡೆದರು.
 
ಗುರುವಾರ ಮುಂಜಾನೆ ಪಟ್ಟಣದಲ್ಲಿ ಅಂಗಡಿ ಗಳು ಮುಚ್ಚಿದ್ದವು. ಆಟೋಗಳು ರಸ್ತೆಗಿಳಿಯಲಿಲ್ಲ. ಜನರ ಒತ್ತಾಯದ ಮೇರೆಗೆ ಪಾರ್ಥಿವ ಶರೀರದ ಮೆರವಣಿಗೆ ಕಡೂರು ಪಟ್ಟಣದ ಗಲ್ಲಿಗಲ್ಲಿಗಳಲ್ಲಿಯೂ ನಡೆಯಿತು.

ಪತ್ನಿ ದೇವಕಿ, ಪುತ್ರಿಯರಾದ ಅಮೃತವರ್ಷಿಣಿ, ಅನನ್ಯ, ಚಿಕ್ಕಪ್ಪ ಕೆ.ಎಂ.ಕೆಂಪರಾಜು, ಸಹೋದರರಾದ ಮಹೇಶ್, ಪ್ರಕಾಶ್, ಶರತ್ ಕಂಬನಿ ಮಿಡಿದರು. ಮಾಜಿ ಸಚಿವ ಗಂಡಸಿ ಶಿವರಾಂ, ಶಾಸಕರಾದ ಸಿ.ಟಿ.ರವಿ, ಸುರೇಶ್, ವೈ.ಸಿ.ವಿಶ್ವ ನಾಥ್, ವೈ.ಎಸ್.ವಿ.ದತ್ತ, ಗಾಯತ್ರಿ ಶಾಂತೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರಪ್ಪುಲ್ಲಾ ಮಂಜುನಾಥ್, ಮಾಜಿ ಶಾಸಕರಾದ ಕೆ.ಬಿ.ಮಲ್ಲಿಕಾರ್ಜುನ್, ಧರ್ಮೇಗೌಡ ಸೇರಿ ದಂತೆ ರಾಜಕೀಯ ಪಕ್ಷಗಳ ಮುಖಂಡರು, ಜಿ.ಪಂ. ಸದಸ್ಯರು, ಕಡೂರು-ಬೀರೂರು ಪುರಸಭೆ ಸದಸ್ಯರು, ಸರ್ಕಾರಿ ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.