ADVERTISEMENT

ಸಮಸ್ಯೆಗಳಿಂದ ಬಳಲುತ್ತಿರುವ ತರೀಕೆರೆ ರೈಲ್ವೆ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 27 ಮೇ 2018, 12:45 IST
Last Updated 27 ಮೇ 2018, 12:45 IST
ತರೀಕೆರೆ ಪಟ್ಟಣದ ರೈಲ್ವೆ ನಿಲ್ದಾಣ
ತರೀಕೆರೆ ಪಟ್ಟಣದ ರೈಲ್ವೆ ನಿಲ್ದಾಣ   

ತರೀಕೆರೆ ಪಟ್ಟಣದ ರೈಲ್ವೆ ನಿಲ್ದಾಣವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಲಾಖೆಯ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಇಲಾಖೆಯ ಮಾಹಿತಿಯ ಪ್ರಕಾರ ಬೀರೂರು- ಶಿವಮೊಗ್ಗ ದವರೆಗೆ ಡಬ್ಲಿಂಗ್ ಕಾಮಗಾರಿ ಆರಂಭವಾಗದ ಕಾರಣ ನಿಲ್ದಾಣ ಮೇಲ್ದರ್ಜೆಗೇರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಸಬೂಬಿನ ಮಧ್ಯೆ ರೈಲ್ವೆ ನಿಲ್ದಾಣದಲ್ಲಿ ಆಗುತ್ತಿರುವ ಕಿರಿಕಿರಿಯನ್ನು ಪ್ರಯಾಣಿಕ ಮಾತ್ರ ಅನುಭವಿಸಿ ಮುಂದಕ್ಕೆ ಚಲಿಸಲೇಬೇಕು ಎನ್ನುವಂತಾಗಿದೆ. ನಿಲ್ದಾಣದಲ್ಲಿ ಮಳೆಗಾಲ
ದಲ್ಲಿ ನೀರು ಹರಿದು ಹೋಗದ ದುಸ್ಥಿತಿ ಏರ್ಪಡುತ್ತಿದ್ದು, ಮಳೆಯಿಂದ ತಲೆ ತಪ್ಪಿಸಿಕೊಳ್ಳುವ ಪ್ರಯಾಣಿಕರು ಮೊಳಕಾ
ಲಿನವರೆಗೆ ಬರುವ ನೀರಿನಲ್ಲಿಯೇ ನಿಲ್ಲಬೇಕಾದ ಸ್ಥಿತಿ ನಿಲ್ದಾಣದಲ್ಲಿದೆ. ಈ ವರೆಗೂ ವಿಶ್ರಾಂತಿ ಗೃಹಗಳನ್ನು ತೆರೆಯಲಾ
ಗಿಲ್ಲ. ಶೌಚಾಲಯ ಇದ್ದರೂ ಉಪಯೋಗವಾಗುತ್ತಿಲ್ಲ. ಪ್ರಯಾಣಿಕರಿಗೆ ಕೂರಲು ಆಸನಗಳಿಲ್ಲ. ಹೀಗೆ ಅನೇಕ ಇಲ್ಲಗಳ ಪಟ್ಟಿ ನಿಲ್ದಾಣದಲ್ಲಿ ಮುಂದುವರೆಯುತ್ತಲೇ ಸಾಗುತ್ತದೆ. ರೈಲ್ವೆ ನಿಲ್ದಾಣದ ಮುಂದೆ ಪಾರ್ಕಿಂಗ್ ವ್ಯವಸ್ಥೆಯಿಲ್ಲದ ಕಾರಣ ಬೇಕಾ ಬಿಟ್ಟಿ ವಾಹನಗಳು ನಿಲುಗಡೆಯಾಗುತ್ತಿವೆ. ಗೂಡಂಗಡಿಗಳ ಹಾವಳಿಯು ಹೆಚ್ಚಾಗಿದ್ದು ಪ್ರಯಾಣಿಕರಿಗೆ ಇದರಿಂದ ನಿತ್ಯ ಕಿರಿಕಿರಿಯಾಗುತ್ತಿದೆ. ಬಿ.ಎಚ್.ರಸ್ತೆಯಿಂದ ರೈಲ್ವೆ ನಿಲ್ದಾಣದವರೆಗೆ ಪಾದಚಾರಿಗಳು ಬರುವಂತಿಲ್ಲ. ಎಲ್ಲಿ ಬೇಕು ಅಲ್ಲಲ್ಲಿ ದ್ವಿಚಕ್ರವಾಹನಗಳು ಹಾಗೂ ಕಾರುಗಳು ಅಡ್ಡಾದಿಡ್ಡಿ ನಿಂತಿರುತ್ತವೆ.

ರೈಲಿನಿಂದ ಇಳಿದು ಹೊರ ಬರುವ ಹಿರಿಯ ಹಾಗೂ ಮಹಿಳಾ ಪ್ರಯಾಣಿಕರಿಗೆ ತುಂಬಾ ತ್ರಾಸದಾಯಕವಾಗಿದೆ. ಶಿವಮೊಗ್ಗ- ಬೆಂಗಳೂರು- ಮೈಸೂರು ಮಾರ್ಗವಾಗಿ ದಿನನಿತ್ಯ ಸಾವಿರಾರು ಪ್ರಯಾಣಿಕರು ಓಡಾಡುತ್ತಿರುತ್ತಾರೆ. ರಜೆ ದಿನಗಳಲ್ಲಿ ಪ್ರಯಾಣಿಕರ ಓಡಾಟ ಅತಿ ಹೆಚ್ಚಾಗಿಯೇ ಇರುತ್ತದೆ. ಆದರೂ ಪೋಲಿಸ್ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಪುಂಡ ಪೋಕರಿಗಳು ಮಹಿಳಾ ಪ್ರಯಾಣಿಕರನ್ನು ಚುಡಾಯಿಸುವ ದೃಶ್ಯ ಮಾಮೂಲಿಯಾಗಿದೆ. ಆದರೆ ಒಬ್ಬನೇ ಒಬ್ಬ ಪೊಲೀಸ್ ಸಿಬ್ಬಂದಿ ಇಲ್ಲಿ ಕಾಣಸಿಗುವುದಿಲ್ಲ. ಈ ಬಗ್ಗೆ ಇಲ್ಲಿನ ಮಹಿಳಾ ಅಧಿಕಾರಿಗೆ ದೂರು ನೀಡಿದರೂ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ಆರೋಪಿಸುವ ನಿತ್ಯ ಪ್ರಯಾಣ ಮಾಡುವ ನಾಗರತ್ನ, ಸಂಸದರು ಹಾಗೂ ಅಧಿಕಾರಿಗಳು ಕೂಡಲೇ ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸಲಿ ಎಂದು ಒತ್ತಾಯಿಸಿದ್ದಾರೆ.

ADVERTISEMENT

ದಾದಾಪೀರ್, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.