ADVERTISEMENT

`ಸಮಾಜದ ನಡೆಯನ್ನು ಸಾಹಿತ್ಯ ತಿದ್ದಲಿ'

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 5:55 IST
Last Updated 6 ಸೆಪ್ಟೆಂಬರ್ 2013, 5:55 IST

ಮೂಡಿಗೆರೆ: ಸಾಹಿತ್ಯ ಸಮಾಜವು ನಡೆಯುವ ದಾರಿಯನ್ನು ತಿದ್ದಬೇಕು ಎಂದು ಅಮೆರಿಕಾದ ಅಕ್ಕ ಸಂಘಟನೆಯ ಅಧ್ಯಕ್ಷ ಡಾ.ವಿಶ್ವಾಮಿತ್ರ ಹಳೆಕೋಟೆ ಅಭಿಪ್ರಾಯಪಟ್ಟರು.

  ತಾಲ್ಲೂಕಿನ ಹಳೆಕೋಟೆ ಗ್ರಾಮದ ರಮೇಶ್ ಮನೆಯಲ್ಲಿ ಬುಧವಾರ ರಾತ್ರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ನಡೆದ `ಮನೆಯಂಗಳದಲ್ಲಿ ಶರಣ ಸಂಗಮ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯ ಸಮಾಜಕ್ಕೆ ಸಹಾಯ ಮಾಡಿದಾಗ, ಸಾಹಿತ್ಯದ ಕೊಡುಗೆ ಸಮಾಜಕ್ಕೆ ಪಸರಿಸುತ್ತದೆ ಎಂದರು. ಅಕ್ಕ ಸಂಘಟನೆಯ ಮೂಲಕ ಎರಡು ವರ್ಷಗಳಿಗೆ ಒಮ್ಮೆ ವಿದೇಶದಲ್ಲಿ ಸಮ್ಮೇಳನಗಳನ್ನು ಏರ್ಪಡಿಸುವ ಮೂಲಕ ತಾಯ್ನೆಲದ ಕಲೆ ಮತ್ತು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ವಿನಿಮಯಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಚಟ್ನಳ್ಳಿ ಮಹೇಶ್ ಮಾತನಾಡಿ, ಇಡೀ ಜಗತ್ತು ಅಶಾಂತಿಯ ನೆಲೆಯಲ್ಲಿದೆ. ಅಂತಹ ಅಶಾಂತಿಯನ್ನು ತೊಲಗಿಸಲು ವಚನ ಸಾಹಿತ್ಯದ ಕೊಡುಗೆಯ ಬಳಕೆ ಅಗತ್ಯವಾಗಿದೆ. ಮನಸ್ಸುಗಳು ಮತಾಂಧತೆಯನ್ನು ಧಿಕ್ಕರಿಸಿ ಸಾಂಸ್ಕೃತಿಕ ಶ್ರಿಮಂತಿಕೆಯ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ಅನ್ಯರ ವಸ್ತುವಿಗೆ ಆಸೆ, ಆಮಿಷಕ್ಕೆ ಬಲಿಯಾಗದೇ ಜಗತ್ತಿಗೆ ಪ್ರಮಾಣಿಕತೆಯ ಬದುಕಿನ ಕೊಡುಗೆ ನೀಡುವ ಪಣತೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ವಚನಕಾರರ ಕಾಯಕ ಸಿದ್ಧಾಂತ ಕುರಿತು ಮಾತನಾಡಿದ ಸಾಹಿತಿ ಕುಂದೂರು ಅಶೋಕ್, 12 ನೇ ಶತಮಾನದಲ್ಲಿಯೆ ವಚನಕಾರರು ಸಮಾನತೆಯ ತತ್ವವನ್ನು ಜಗತ್ತಿಗೆ ಸಾರಿದರೂ, ಇಂದಿಗೂ ಅಸಮಾನತೆ ತಾಂಡವಾಡುತ್ತಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.

ಕಾರ್ಯಕ್ರಮಲ್ಲಿ ತಾಲ್ಲೂಕು ಕಸಾಪ ಘಟಕ, ಜಿಲ್ಲಾ ಸರಣ ಸಾಹಿತ್ಯ ಪರಿಷತ್ ಮತ್ತು ಲಯನ್ಸ್ ಸಂಸ್ಥೆ ವತಿಯಿಂದ ಅಕ್ಕ ಸಂಘಟನೆಯ ಅಧ್ಯಕ್ಷ ಡಾ. ವಿಶ್ವಾಮಿತ್ರ ಹಳೆಕೋಟೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಬೆಳವಾಡಿ ಮಂಜುನಾಥ್, ಹಳೆಕೋಟೆ ರಮೇಶ್ ಮಾತನಾಡಿದರು. ಹಳಸೆ ಶಿವಣ್ಣ, ನಾಗರಾಜ್‌ರಾವ್, ದೀಪಕ್ ದೊಡ್ಡಯ್ಯ, ಎಂ.ಎಸ್. ಅಶೋಕ್, ಪ್ರಭುಲಿಂಗಶಾಸ್ತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.