ADVERTISEMENT

ಹಂದಿಬನ ರಸ್ತೆ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 5:44 IST
Last Updated 6 ಜುಲೈ 2013, 5:44 IST

ಶೃಂಗೇರಿ: ಕಳೆದ ಎರಡು ದಿನಗಳಿಂದ ತುಂಗಾ ನದಿಯಲ್ಲಿ ಉಂಟಾಗಿದ್ದ ಪ್ರವಾಹ ಶುಕ್ರವಾರ ಮಳೆ ಕಡಿಮೆಯಾದ ಕಾರಣ ಇಳಿಮುಖವಾಗಿದೆ.

ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಕೂತಗೋಡು ಗ್ರಾಮಪಂಚಾಯತಿಯ ತೆಕ್ಕೂರು-ಮಲ್ನಾಡ್ ರಸ್ತೆಯ ಮೇಲೆ ಮಣ್ಣು ಕುಸಿದಿದ್ದು ಹಂದಿಬನ ಗ್ರಾಮದ 40ಕ್ಕೂ ಹೆಚ್ಚು ಮನೆಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಂದಿಬನದ ತಮ್ಮಯ್ಯಗೌಡ ಅವರ ಮನೆಯ ಹಿಂಭಾಗದ ಸುಮಾರು ಐವತ್ತೈದು ಅಡಿ ಎತ್ತರದ ಗುಡ್ಡ ಜರಿದು ಮನೆಗೆ ಹಾನಿಯಾಗಿದೆ. ಧರೆ ಕುಸಿತದಿಂದ ಮಲ್ನಾಡ್‌ಗೆ ಸಂಪರ್ಕ ಕಲ್ಪಿಸುವ ಡಾಂಬರು ರಸ್ತೆ ಹಾಗೂ ಮಣ್ಣಿನ ರಸ್ತೆ ಮೇಲೆ ಅಪಾರ ಪ್ರಮಾಣದ ಮಣ್ಣು ಶೇಖರಣೆ ಆಗಿದೆ.

ಮಣ್ಣು ಕುಸಿತದಿಂದ ಗ್ರಾಮಕ್ಕೆ ಸರಬರಾಜು ಆಗುತ್ತಿದ್ದ ಕುಡಿಯುವ ನೀರಿನ ಕೊಳವೆ ಸಂಪರ್ಕ ತುಂಡಾಗಿದೆ. ಇದರಿಂದ ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ನೀರಿನ ಸರಬರಾಜು ಸ್ಥಗಿತಗೊಂಡಿದೆ. ವಿದ್ಯುತ್ ಕಂಬಗಳು ಬೀಳುವ ಸ್ಥಿತಿ ತಲುಪಿದ ಕಾರಣ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ರಸ್ತೆ ಸಂಪರ್ಕ ಕಡಿತದಿಂದ ಹಳ್ಳಿಗೆ ಯಾವುದೇ ವಾಹನ ಸಂಪರ್ಕ ಸಾಧ್ಯವಾಗುತ್ತಿಲ್ಲ.

ಜಿ.ಪಂ.ಎಂಜಿನಿಯರ್ ಮಹೇಶ್, ಕಂದಾಯ ಇಲಾಖೆಯ ಸಣ್ಣರಂಗಯ್ಯ, ಗ್ರಾಮಸ್ಥರಾದ ರಮೇಶ್‌ಭಟ್, ವೆಂಕಟೇಶ್ ಮುಂತಾದವರು ಗುರುವಾರ ಸ್ಥಳ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.