ADVERTISEMENT

‘ಅಂತರ್ಜಲ ವೃದ್ಧಿಸಿ ಶುದ್ಧ ಜಲ ಪಡೆಯಲು ಸಾಧ್ಯ’

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 9:59 IST
Last Updated 19 ಡಿಸೆಂಬರ್ 2013, 9:59 IST

ಚಿಕ್ಕಮಗಳೂರು: ಮಳೆ ನೀರು ಒಳಗೊಂಡಂತೆ ದಿನ ನಿತ್ಯದ ಗೃಹ ಬಳಕೆ ನೀರು ಇಂಗಿಸುವುದ ರೊಂದಿಗೆ ಅಂತರ್ಜಲ ಹೆಚ್ಚಿಸಿ ಶುದ್ಧ ನೀರು ಪಡೆಯಲು ಸಾಧ್ಯ ಎಂದು ಜಿ.ಪಂ. ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ತಿಳಿಸಿದರು.

ತಾಲ್ಲೂಕಿನ ಸಿಂದಿಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ಹಾಗೂ ಆರ್ಟ್ ಆಫ್ ಲಿವಿಂಗ್, ವ್ಯಕ್ತಿ ವಿಕಸನ ಕೇಂದ್ರದ ಸಹಯೋಗದೊಂದಿಗೆ ವೇದಾವತಿ ನದಿ ಪುನಃಶ್ಚೇತನಕ್ಕೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅಂತ ರ್ಜಲ ಅಭಿವೃದ್ಧಿ ಮತ್ತು ದ್ರವ್ಯ ತ್ಯಾಜ್ಯ ವಿಲೇವಾರಿ ಪ್ರಾಯೋಜಿತ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.

  ಲಕ್ಯಾ ಹೋಬಳಿಯಲ್ಲಿ ಕಳೆದ ಮೂರು ವರ್ಷದಿಂದ ಬರದ ಪರಿಸ್ಥಿತಿ ಉಂಟಾಗಿ, ಶುದ್ಧ ಕುಡಿಯುವ ನೀರಿನ ತೊಂದರೆ ಇದ್ದು, ಕೊಳವೆ ಬಾವಿಗಳನ್ನು 600 ಅಡಿಗಳ ಆಳಕ್ಕೆ ಕೊರೆಯಬೇಕಾಗಿದ್ದು, ಅವುಗಳಲ್ಲಿ ದೊರಕುವ ನೀರು ಫ್ರೋರೈಡ್ ಅಂಶ ಇರುವುದು ನಾವು ಕಾಣುತ್ತಿದ್ದೇವೆ. ಮಳೆ ನೀರು ಸೇರಿದಂತೆ ಗ್ರಾಮಸ್ಥರು ಉಪಯೋಗಿಸಿ ಬಿಟ್ಟ ಚರಂಡಿ ನೀರನ್ನು ಇಂಗು ಬಾವಿ, ಕಲ್ಲುಗುಂಡುಗಳ ತಡೆ, ನೀರಿನ ಹೊಂಡಗಳ ನಿರ್ಮಾಣ ದೊಂದಿಗೆ ಅಂತರ್ಜಲ ಹೆಚ್ಚಿಸುವುದ ರೊಂದಿಗೆ ಶುದ್ಧ ನೀರು ಪಡೆಯಲು ಸಾಧ್ಯ ಎಂದರು.

ಸಿಂದಿಗೆರೆ ಗ್ರಾಮದಲ್ಲಿ 7 ಕ್ಕೂ ಹೆಚ್ಚು ಇಂಗು ಗುಂಡಿಗಳ ನಿರ್ಮಾಣ ಮಾಡಲಾಗುವುದು.    ಲಕ್ಯಾ ಹೋಬಳಿಯ 11 ಗ್ರಾಮ ಪಂಚಾಯಿ ತಿಯ ಒಟ್ಟು 44 ಕ್ಕೂ ಹೆಚ್ಚು ಗ್ರಾಮಗಳಲ್ಲಿ 270 ಕಲ್ಲುಗುಂಡಿಗಳ ತಡೆ, 486 ಇಂಗುಬಾವಿ, 16 ಇಂಜ ಕ್ಷನ್ ಬಾವಿ ಹಾಗೂ 38 ನೀರಿನ ಹೊಂಡಗಳನ್ನು ಮಾಡುವುದರೊಂದಿಗೆ ವೇದಾವತಿ ನದಿಯ ಮೂಲ ಪುಃ ನಶ್ಚೇತನಗೊಳಿಸಲಾಗುವುದು ಎಂದರು.

  ಸಿಂದಿಗೆರೆ ಗ್ರಾಮದಲ್ಲಿ ಶುದ್ಧಗಂಗಾ ಜಲ ಶುದ್ಧೀಕರಣ ಘಟಕವನ್ನು ಗ್ರಾಮ ಪಂಚಾಯಿತಿ ಹಾಗೂ  ಆರ್ಟ್ಸ್ ಆಫ್ ಲಿವಿಂಗ್ ವ್ಯಕ್ತಿ ವಿಕಸನ ಕೇಂದ್ರ ಸಹಯೋಗದೊಂದಿಗೆ ಶೀಘ್ರವಾಗಿ ಪ್ರಾರಂಭಿಸಲಾಗುವುದು ಎಂದರು.

  ಈ ಭಾಗದ ಜನರ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಸ್ಥಳೀಯವಾಗಿ ದೊರಕುವ ಕಚ್ಚಾವಸ್ತುಗಳ ಬಳಕೆ ಯೊಂದಿಗೆ  ಸಿದ್ಧ ವಸ್ತುಗಳನ್ನು ಮಾರ್ಪಾಡು ಮಾಡುವುದು ಹಾಗೂ ತರಕಾರಿ ಬೆಳೆ ಬೆಳೆಯಲು ಪ್ರೋತ್ಸಾಹಿಸಿ ಅವುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಮಳೆ ನೀರಿನ ಸಂಗ್ರಹ, ಇಂಗುಗುಂಡಿಗಳ ಮಹತ್ವ ಹಾಗೂ ಅಂತರ್ಜಲ ಹೆಚ್ಚಿಸುವ ಬಗ್ಗೆ ಜನರಲ್ಲಿ ಜಲಸಾಕ್ಷರತೆ ಮೂಡಿಸುವ ಅವಶ್ಯಕತೆ ಇದೆ ಎಂದರು.

  ಆರ್ಟ್ಸ್ ಆಫ್ ಲಿವಿಂಗ್ ವ್ಯಕ್ತಿ ವಿಕಸನದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ್ ಮಾತನಾಡಿ, ವೇದಾವತಿ ನದಿಯ ಮೂಲವಾದ ಲಕ್ಯಾ ಹೋಬಳಿ ಯಲ್ಲಿ ಜಲದ ಸಮಸ್ಯೆ ಕಂಡುಬರುತ್ತಿದೆ. ಕೊಳವೆ ಬಾವಿಗಳನ್ನು 600 ಅಡಿಗಿಂ ತಲೂ ಹೆಚ್ಚು ಆಳದಲ್ಲಿ ಕೊರೆದರೂ ಅದರಲ್ಲಿ ದೊರೆಯುವ ನೀರು ಹೆಚ್ಚು ಲವಣಾಂಶಗಳಿಂದ ಕೂಡಿರುತ್ತದೆ. ಜತೆಗೆ ಫ್ಲೋರೈಡ್‌ನಿಂದ ಕೂಡಿರುತ್ತದೆ. ಆದರೆ, 150 ಅಡಿ ಆಳದಲ್ಲಿ ಕೊರೆದರೂ ಅದರಲ್ಲಿ ದೊರಕುವ ನೀರು ಹೆಚ್ಚಿನ ಲವಣಾಂಶ ಹೊಂದದೆ ಕುಡಿಯಲು ಶುದ್ಧವಾ ಗಿರುತ್ತದೆ. ಈ ನಿಟ್ಟಿನಲ್ಲಿ ನಾವುಗಳು ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ಸೂಕ್ತ ಎಂದರು. 

ಜಿಲ್ಲಾ ಪಂಚಾಯಿತಿ ಸದಸ್ಯ ಕಲ್ಮುರ ಡಪ್ಪ, ಆರ್ಟ್ಸ್ ಆಫ್ ಲಿವಿಂಗ್ ವ್ಯಕ್ತಿ ವಿಕಸನ ಸಂಸ್ಥೆಯ ನಾಗರಾಜ್ ಮಾತನಾಡಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷೆ ಪುಷ್ಪಲತಾ, ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು  ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.