ADVERTISEMENT

‘ಮಾನವ ಹಕ್ಕು ಜನ್ಮದಿಂದ ಬಂದದ್ದು’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 9:26 IST
Last Updated 11 ಡಿಸೆಂಬರ್ 2013, 9:26 IST

ತರೀಕೆರೆ: ಮನುಷ್ಯನಾಗಿ ಹುಟ್ಟಿನಿಂದ ಗಳಿಸಿಕೊಂಡ ಹಕ್ಕುಗಳೇ ಮಾನವ ಹಕ್ಕುಗಳು, ಇದು ಹುಟ್ಟಿನಿಂದಲೇ ಅಂತರ್ಗತವಾಗಿ ಪ್ರತಿ ವ್ಯಕ್ತಿಗೆ ಬರುವಂತಹದ್ದು ಎಂದು ಸಿವಿಲ್ ಹಿರಿಯ ನ್ಯಾಯಾಧೀಶ ಹಿದಾಯತ್ ವುಲ್ಲಾ ತಿಳಿಸಿದರು. ಪಟ್ಟಣದಲ್ಲಿ ಮಂಗಳವಾರ ಮಾನವ ಹಕ್ಕು ದಿನಾಚರಣೆ ಅಂಗವಾಗಿ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಪೊಲೀಸ್ ಇಲಾಖೆ ಜಂಟಿ ಆಶ್ರಯದಲ್ಲಿ ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆ ನೌಕರರಿಗೆ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಭಾರತೀಯ ಸಂಸ್ಕೃತಿಗೆ ಮಾನವ ಹಕ್ಕು ಹೊಸದಲ್ಲ. ನಮ್ಮ ವೇದ, ಉಪನಿಷತ್ತುಗಳಲ್ಲಿ ಮಾನವ ಹಕ್ಕು ಮತ್ತು ಅದರ ಉಲ್ಲಂಘನೆ ಅದಕ್ಕೆ ನೀಡುವ ಶಿಕ್ಷೆ ಕುರಿತಂತೆ ಉಲ್ಲೇಖಿಸಲಾಗಿದೆ. ಮಾನವ ಹಕ್ಕುಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚು ನಡೆಯುತ್ತಿರುವುದು ಸಂವಿಧಾನಬದ್ಧವಾಗಿ ಸರ್ಕಾರದಿಂದ ನೇಮಕಗೊಂಡಿರುವ ಸಂಸ್ಥೆಗಳಲ್ಲಿ ಎನ್ನುವುದು ದುರ್ದೈವದ ಸಂಗತಿ. ಗೌರವ ಮತ್ತು ರಕ್ಷಣೆ ಉಲ್ಲಂಘನೆ ಕುರಿತಂತೆ ಸ್ವಯಂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ’ ಎಂದರು.

ಮಾನವ ಹಕ್ಕು ಕುರಿತಂತೆ ಉಪನ್ಯಾಸ ನೀಡಿದ ವಕೀಲ ಶಿವಶಂಕರನಾಯ್ಕ ಮಾತನಾಡಿ, ಅತಿ ಹೆಚ್ಚು ಮಾನವ ಉಲ್ಲಂಘನೆಯಂತಹ ಪ್ರಕರಣಗಳು ಕಂಡು ಬರುತ್ತಿರುವುದು  ಪೊಲೀಸ್  ಇಲಾಖೆಗಳಲ್ಲಿ. ಠಾಣೆಗೆ ಬರುವವರೆಲ್ಲ ಅಪರಾಧಿಗಳು  ಎನ್ನುವ ಮನೋಭಾವ ಪೊಲೀಸ್ ಅಧಿಕಾರಿಗಳಲ್ಲಿ ಇನ್ನೂ ಬೇರೂರಿರುವುದು ಇದಕ್ಕೆ ಪ್ರಮುಖ ಕಾರಣ.

  ಮೊದಲು ದೂರು ಸಲ್ಲಿಸುವವರ ಪರವಾಗಿ ಇಲಾಖೆ ಅಧಿಕಾರಿಗಳು  ವರ್ತಿಸುವ ಮನೋಭಾವ ಬದಲಾಗಿ ದೂರು ಬಂದ ನಂತರ ತಾಳ್ಮೆ ಮತ್ತು ಸಹನೆಯಿಂದ ತನಿಖೆ ಕೈಗೊಂಡು ಸಮಸ್ಯೆ ಪರಿಹರಿಸುವಲ್ಲಿ ಮುಂದಾದಾಗ ಮಾನವ ಹಕ್ಕುಗಳ ಉಲ್ಲಂಘನೆ­ಯಂತಹ ಪ್ರಕರಣಗಳನ್ನು ತಡೆಯಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸರ್ಕಾರಿ ವಕೀಲ ಬಿ.ಎಚ್.ಭಾಸ್ಕರ್, ವಕೀಲರ ಸಂಘದ ಅಧ್ಯಕ್ಷ ಸಿ.ಎಸ್.ಶಿವಪ್ರಸಾದ್, ಡಿವೈಎಸ್ ಪಿ ಚಿದಾನಂದ ಸ್ವಾಮಿ, ಆರಕ್ಷಕ ವೃತ್ತ ನಿರೀಕ್ಷಕ ಷರೀಫ್, ಆರಕ್ಷಕ ನಿರೀಕ್ಷಕ ಸುರೇಶ್, ವಕೀಲ ಸುರೇಶ್ಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT