ADVERTISEMENT

28 ಸ್ಥಾನಗಳಿಗೆ ಅವಿರೋಧ ಆಯ್ಕೆ

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 15:10 IST
Last Updated 8 ಜೂನ್ 2019, 15:10 IST

ಚಿಕ್ಕಮಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಚುನಾವಣೆಗೆ ದಿನಗಣನೆ ಶುರುವಾಗಿದೆ. 62 ಸ್ಥಾನಗಳ ಪೈಕಿ 28ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ಎಸ್‌.ಎಲ್‌.ಪ್ರಸನ್ನಕುಮಾರ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಒಟ್ಟು 48ಇಲಾಖೆಗಳಿಂದ 62 ಸ್ಥಾನಗಳಿವೆ. ಈ ಪೈಕಿ 28 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿಕೆ 34 ಸ್ಥಾನಗಳ ಪೈಕಿ ಎರಡು ಸ್ಥಾನಗಳಿಗೆ ಅಭ್ಯರ್ಥಿಗಳಿಲ್ಲ. 32 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ’ ಎಂದು ತಿಳಿಸಿದರು.

‘ಇದೇ 3ರಂದು ನಾಮಪತ್ರ ಪರಿಶೀಲನೆ ಪ್ರಕ್ರಿಯೆ ನಡೆಯಿತು. ನಾಮಪತ್ರ ಹಿಂಪಡೆಯಲು ಇದೇ 4 ಕಡೆ ದಿನವಾಗಿತ್ತು. ಒಟ್ಟು 135 ನಾಮಪತ್ರ ಸಲ್ಲಿಕೆಯಾಗಿದ್ದವು. ಈ ಪೈಕಿ 90 ಅಂಗೀಕೃತವಾಗಿವೆ. 19 ತಿರಸ್ಕೃತವಾಗಿವೆ. 3 ಪರಿಗಣಿಸದಿರುವುದು(ಒಬ್ಬರು ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸಿದ್ದಾಗ ಒಂದು ಅಂಗೀಕೃತವಾದರೆ ಉಳಿದವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ) ಇವೆ. 23 ಮಂದಿ ಹಿಂಪಡೆದಿದ್ದಾರೆ. ಅಂತಿಮವಾಗಿ 61 ಉಮೇದುವಾರರು ಕಣದಲ್ಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಇದೇ 13ರಂದು ಚುನಾವಣೆಗೆ ಮತದಾನ ನಿಗದಿಯಾಗಿದೆ. ನಗರ ಬಸವನಹಳ್ಳಿಯ ಬಾಲಿಕಾ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಅದೇ ದಿನ ಸಂಜೆ 4.30ರ ನಂತರ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಬಾಕ್ಸ್‌

‘ಕಣ್ತಪ್ಪಿನಿಂದ ಎರಡೂ ಪಟ್ಟಿಯಲ್ಲಿ ಹೆಸರು ಪ್ರಕಟ’

‘ನ್ಯಾಯಾಂಗದ ನೌಕರ ಟಿ.ಸುರೇಶ್‌ ಅವರ ಹೆಸರು ಅಂಗೀಕೃತ ಮತ್ತು ತಿರಸ್ಕೃತ ಎರಡೂ ಪಟ್ಟಿಯಲ್ಲೂ ಪ್ರಕಟವಾಗಿತ್ತು. ಕಣ್ತಪ್ಪಿನಿಂದ ಈ ರೀತಿ ಆಗಿತ್ತು’ ಎಂದು ಪ್ರಸನ್ನಕುಮಾರ್‌ ಸ್ಪಷ್ಟಪಡಿಸಿದರು.

‘ಸುರೇಶ್‌ ಅವರ ನಾಮಪತ್ರದಲ್ಲಿ ದಿನಾಂಕ ತಪ್ಪಾಗಿ ನಮೂದಿಸಲಾಗಿದೆ. ಮೂರು ಕಡೆಯೂ (ಸೂಚಕ, ಅನಮೋದಕ, ಅಭ್ಯರ್ಥಿ) ದಿನಾಂಕ ತಪ್ಪಾಗಿದೆ. ಅವರ ನಾಮಪತ್ರ ತಿರಸ್ಕೃತವಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.