ADVERTISEMENT

ಚಿಕ್ಕಮಗಳೂರು | ಜಿಲ್ಲೆಯಲ್ಲಿ 4.75 ಕೋಟಿ ಮಹಿಳೆಯರು ಉಚಿತ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 6:41 IST
Last Updated 15 ಜುಲೈ 2025, 6:41 IST
ಬಾಳೆಹೊನ್ನೂರಿನ ಬಸ್ ನಿಲ್ದಾಣದಲ್ಲಿ ನಡೆದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಕೆಎಸ್‍ಆರ್‌ಟಿಸಿ ಚಾಲಕ, ನಿರ್ವಾಹಕರನ್ನು ಸನ್ಮಾನಿಸಲಾಯಿತು. ಚಂದ್ರಮ್ಮ, ಎಚ್.ಎಂ.ಸತೀಶ್, ಶಶಿಕುಮಾರ್, ರಾಜು, ರತ್ನಾಕರ್, ರವಿಚಂದ್ರ ಭಾಗವಹಿಸಿದ್ದರು.
ಬಾಳೆಹೊನ್ನೂರಿನ ಬಸ್ ನಿಲ್ದಾಣದಲ್ಲಿ ನಡೆದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಕೆಎಸ್‍ಆರ್‌ಟಿಸಿ ಚಾಲಕ, ನಿರ್ವಾಹಕರನ್ನು ಸನ್ಮಾನಿಸಲಾಯಿತು. ಚಂದ್ರಮ್ಮ, ಎಚ್.ಎಂ.ಸತೀಶ್, ಶಶಿಕುಮಾರ್, ರಾಜು, ರತ್ನಾಕರ್, ರವಿಚಂದ್ರ ಭಾಗವಹಿಸಿದ್ದರು.   

ಬಾಳೆಹೊನ್ನೂರು: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 4.75 ಕೋಟಿ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಇದರಿಂದ ಜಿಲ್ಲೆಯ ಕೆಎಸ್‍ಆರ್‌ಟಿಸಿ ಡಿಪೊಗೆ ₹175 ಕೋಟಿ ಆದಾಯ ಬಂದಿದೆ ಎಂದು ಕೆಎಸ್‍ಆರ್‌ಟಿಸಿ ಸಹಾಯಕ ಸಂಚಾರಿ ಅಧೀಕ್ಷಕ ಸುರೇಶ್‍ಕುಮಾರ್ ತಿಳಿಸಿದರು.

ಶಕ್ತಿ ಯೋಜನೆ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲ್ಲೂಕುಗಳ ಗ್ಯಾರಂಟಿ ಅನುಷ್ಠಾನ ಸಮಿತಿ ಸೋಮವಾರ ಪಟ್ಟಣದಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಜಿಲ್ಲೆಯ ಕೆಎಸ್‌ಆರ್‌ಟಿಸಿ ಡಿಪೋ ಒಂದರಲ್ಲಿಯೇ ಶೇ 32 ರಷ್ಟು ಹೆಚ್ಚಿಗೆ ಲಾಭ ಬಂದಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮವನ್ನು ಟೀಕೆ ಮಾಡುವ ವಿರೋಧ ಪಕ್ಷದವರು ನಮ್ಮ ಗ್ಯಾರಂಟಿ ಕಾರ್ಯಕ್ರಮವನ್ನು ಉಪಯೋಗಿಸಿಕೊಳ್ಳುವುದನ್ನು ಬಿಡಬೇಕು. 2 ಸಾವಿರ ಗೃಹಲಕ್ಷ್ಮಿ ಹಣವನ್ನು ಪಡೆದ ಮನೆಯ ಪುರುಷರು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತಿದ್ದಾರೆ. ನಮ್ಮ ಉಚಿತ ಭಾಗ್ಯವನ್ನು ಬಳಕೆ ಮಾಡಿಕೊಂಡು ಟೀಕೆ ಮಾಡುವುದು ಖಂಡನೀಯ. ಕಾಂಗ್ರೆಸ್‍ನ ಕಾರ್ಯಕರ್ತನಾಗಿರುವ ನಾನು ಕೇಂದ್ರ ಸರ್ಕಾರದಿಂದ ಜಾರಿ ಮಾಡಿರುವ ಕೃಷಿ ಸಮ್ಮಾನ್ ಯೋಜನೆಯನ್ನು ಬಳಕೆ ಮಾಡಿಕೊಂಡಿಲ್ಲ. ಇದು ಪಕ್ಷದ ಮೇಲಿನ ನನ್ನ ನಿಷ್ಠೆಗೆ ಸಾಕ್ಷಿಯಾಗಿದೆ. ಇಂತಹ ಕೆಲಸವನ್ನು ವಿರೋಧ ಪಕ್ಷದವರು ಮಾಡಬೇಕಿದೆ. ನೈತಿಕತೆ ಇದ್ದ ಬಿಜೆಪಿಯವರು ಈ ಬಗ್ಗೆ ಮಾತನಾಡಬೇಕೇ ಹೊರತು ನೈತಿಕತೆ ಇಲ್ಲದವರಿಗೆ ಮಾತನಾಡುವ ಅರ್ಹತೆಯಿಲ್ಲ ಎಂದರು.

ADVERTISEMENT

ಎನ್.ಆರ್.ಪುರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಮಾತನಾಡಿ, ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆದಂತೆ ಪಂಚ ಗ್ಯಾರಂಟಿಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಿ ತನ್ನ ಬದ್ಧತೆಯನ್ನು ಮೆರೆದಿದೆ ಎಂದರು.

ಕೆಎಸ್‍ಆರ್‌ಟಿಸಿ ಸಂಚಾರ ನಿಯಂತ್ರಕ ವಸಂತಕುಮಾರ್, ಎಟಿಸಿ ಸುರೇಶ್ ನಾಯಕ್, ಕೊಪ್ಪ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಶಿಕುಮಾರ್, ಶೃಂಗೇರಿ ಸಮಿತಿ ಅಧ್ಯಕ್ಷ ರಾಜು, ಜಿಲ್ಲಾ ಸಮಿತಿ ಸದಸ್ಯ ಓಣಿತೋಟ ರತ್ನಾಕರ್, ಗ್ರಾಪಂ ಅಧ್ಯಕ್ಷ ರವಿಚಂದ್ರ, ಉಪಾಧ್ಯಕ್ಷೆ ರಂಜಿತಾ, ಕಾಂಗ್ರೆಸ್ ವಕ್ತಾರ ಹಿರಿಯಣ್ಣ, ಹೋಬಳಿ ಅಧ್ಯಕ್ಷ ಮಹಮ್ಮದ್ ಹನೀಫ್, ಬಗರ್‌ಹುಕುಂ ಸಮಿತಿ ಸದಸ್ಯೆ ಹೇಮಲತಾ, ಪ್ರಮುಖರಾದ ಎಂ.ಎಸ್.ಜಯಪ್ರಕಾಶ್, ಮಹೇಶ್ ಆಚಾರ್ಯ, ಶಶಿಕಲಾ, ಸಂತೋಷ್‍ಕುಮಾರ್, ಬಿ.ಕೆ.ಮಧುಸೂದನ್, ಸದಾಶಿವ, ಅರುಣ್‍ಕುಮಾರ್, ಟಿ.ಟಿ.ಇಸ್ಮಾಯಿಲ್, ಹೂವಮ್ಮ, ಕೆ.ಕೆ.ಗೌತಮ್, ಇಬ್ರಾಹಿಂ ಶಾಫಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.