ಕಡೂರು: ಅನಸೂಯಾ ಜಯಂತಿಗೆ ಕಡೂರಿನಿಂದ 2 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿರುವುದು ಧರ್ಮಜಾಗೃತಿ ಬಲಗೊಳ್ಳುತ್ತಿರುವ ಸಂಕೇತ ಎಂದು ಮಾಜಿ ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.
ಗುರುವಾರ ಪಟ್ಟಣದ ಬಿಜೆಪಿ ಮಂಡಲ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಡೂರು- ಬೀರೂರು ಪಟ್ಟಣ ಹಾಗೂ ಗ್ರಾಮೀಣ ಭಾಗದ ಮಹಿಳೆಯರು ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಸ್ವಪ್ರೇರಣೆಯಿಂದ ಅನಸೂಯಾ ಜಯಂತಿಯಲ್ಲಿ ಭಾಗವಹಿಸಲು ಭಕ್ತಿಯಿಂದ ತೆರಳಿದ್ದಾರೆ. ಅವರಿಗೆ ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ಶನಿವಾರ ದತ್ತಪೀಠದಲ್ಲಿ ನಡೆಯಲಿರುವ ದತ್ತ ಜಯಂತಿಗೆ ಕಡೂರಿನಿಂದ 5 ಸಾವಿರಕ್ಕೂ ಹೆಚ್ಚು ದತ್ತ ಮಾಲಾಧಾರಿಗಳು ಭಾಗವಹಿಸಲಿದ್ದಾರೆ’ ಎಂದರು.
ದತ್ತ ಮಾಲಾ ಅಭಿಯಾನದ ಜಿಲ್ಲಾ ಪ್ರಮುಖ್ ಕಡೂರು ಎ.ಮಣಿ ಮಾತನಾಡಿ, ‘ದತ್ತಪೀಠವು ಕರ್ನಾಟಕದ ಅಯೋಧ್ಯೆಯಾಗಬೇಕೆಂಬ ಆಶಯ ನಮ್ಮೆಲ್ಲರದ್ದು. ಸರ್ಕಾರ ದತ್ತ ಪಾದುಕೆಗಳಿಗೆ ನಿತ್ಯಪೂಜೆಗೆ ಅವಕಾಶ ನೀಡಬೇಕು. ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ದೇವಾನಂದ್, ಮುಖಂಡರಾದ ಮಲ್ಲಿಕಾರ್ಜುನ್(ಮಲ್ಲು), ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಾವೇರಿ ಲಕ್ಕಪ್ಪ, ವನಮಾಲ ದೇವರಾಜ್, ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸಿದ್ದಪ್ಪ, ಶಾಮಿಯಾನ ಚಂದ್ರು, ಕುರುಬಗೆರೆ ಮಹೇಶ್, ಬಳ್ಳೇಕೆರೆ ಶಶಿ, ಹುಲ್ಲೇಹಳ್ಳಿ ಲಕ್ಷ್ಮಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.