ADVERTISEMENT

ತೊಕ್ಕೊಟ್ಟು: ಕಾಂಗ್ರೆಸ್‌ ಕಾರ್ಯಕರ್ತರಿಂದ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 9:45 IST
Last Updated 9 ಫೆಬ್ರುವರಿ 2018, 9:45 IST

ಉಳ್ಳಾಲ: ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ತೊಕ್ಕೊಟ್ಟುವಿನಲ್ಲಿ ಕ್ಷೇತ್ರ ಕಾಂಗ್ರೆಸ್‌ನಿಂದ  ಗುರುವಾರ ರಸ್ತೆ ತಡೆ ನಡೆಯಿತು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಹಿಳಾ ಕಾಂಗ್ರೆಸ್, ಹಿಂದುಳಿದ ವರ್ಗಗಳ ವಿಭಾಗ, ಅಲ್ಪಸಂಖ್ಯಾತ ವಿಭಾಗ ಮತ್ತು ಯುವ ಕಾಂಗ್ರೆಸ್ ಸಮಿತಿಯಿಂದ ನಡೆದ ಪ್ರತಿಭಟನೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿದರು.

‘ದೇಶದಲ್ಲಿ ಪ್ರಚಾರಕ್ಕಿಂತ ಹೆಚ್ಚು ಅಪಪ್ರಚಾರಗಳಿಗೆ ಹೆಚ್ಚು ಬೆಲೆ ಸಿಗುತ್ತಿವೆ. ಅಪಪ್ರಚಾರ ಮಾಡಿಯೇ ಆಡಳಿತಕ್ಕೆ ಬರುತ್ತಿರುವ ಬಿಜೆಪಿ ಕಾರ್ಯತಂತ್ರವನ್ನು ಜನತೆ ವಿಫಲಗೊಳಿಸಬೇಕಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು.

‘ಜನ ಕುಳಿತು ಊಟ ಮಾಡಲಿ ಅನ್ನುವ ಉದ್ದೇಶದಿಂದ ಕಾಂಗ್ರೆಸ್ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದರೆ ಅದನ್ನು ಟೀಕಿಸುವ ಬಿಜೆಪಿಗರು ಇದು ಕೇಂದ್ರ ಸರ್ಕಾರದ ಯೋಜನೆ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಹಿಂದೂ, ಮುಸ್ಲಿಂ ದರೋಡೆ, ಕೊಲೆ ವಿಚಾರದಲ್ಲಿಯೇ ರಾಜಕೀಯ ನಡೆಸುತ್ತಿರುವ ಕೇಂದ್ರ ಸರ್ಕಾರ ಜನರನ್ನು ಸಂಕಷ್ಟಕ್ಕೆ ದೂಡುವ ಪ್ರಯತ್ನ ನಡೆಸುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಗಣಿ ಹಗರಣದಲ್ಲಿ ಭ್ರಷ್ಟಾಚಾರ ನಡೆಸಿ ಯಡಿಯೂರಪ್ಪ ಜೈಲಿಗೆ ಹೋಗಿದ್ದಾರೆ. ಭ್ರಷ್ಟಾಚಾರಿಗಳನ್ನು ಬದಿಯಲ್ಲಿ ಕುಳ್ಳಿರಿಸಿ ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿವೆ ಅನ್ನುವ ಆರೋಪ ಮಾಡುತ್ತಿರುವ ಮೋದಿ ಯವರಿಗೆ‌ ನೈತಿಕತೆಯಿಲ್ಲ’ ಎಂದು ಆರೋಪಿಸಿದರು.

ಮದುವೆಯಾದರೂ ಪತ್ನಿ ಯನ್ನು ಬಿಟ್ಟಿರುವ ಪ್ರಧಾನಿ ಮೋದಿಯವರು ತ್ರಿವಳಿ ತಲಾಖ್ ಬಗ್ಗೆ ಮಾತನಾಡುತ್ತಿದ್ದಾರೆ. ತಾವು ಮದುವೆಯಾದ ಪತ್ನಿಗೆ ತಲಾಖ್ ನೀಡದವರು, ಪತ್ನಿಗೆ ಅಪಘಾತವಾ ದರೂ ತಲೆಕೆಡಿಸಿಕೊಳ್ಳದೆ ಕಾಳಜಿ ವಹಿಸದ ಪ್ರಧಾನಿ ದೇಶದ ಬಡವರ ಬಗ್ಗೆ ಚಿಂತನೆ ನಡೆಸಲು ಸಾಧ್ಯವೇ ಎಂದರು.

ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿ ‘ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸರಿಯಾಗಿ ನಡೆಯುತ್ತಿತ್ತು. ಅತಿ ವೇಗವಾಗಿ ನೇತ್ರಾವತಿ ನೂತನ ಸೇತುವೆ ಕಾಮಗಾರಿ ಮುಗಿದಿತ್ತು. ಇದೀಗ ಎನ್‌ಡಿಎ ಸರಕಾರ ಬಂದ ನಂತರ ಹೆದ್ದಾರಿಯುದ್ದಕ್ಕೂ ಮೇಲ್ಸೇತುವೆ ಕಾಮಗಾರಿಗಳು ಕುಂಠಿತವಾಗಿದೆ. ಜಿಲ್ಲೆಗೆ ಬೆಂಕಿ ಕೊಡುವ ಸಂಸದರು ಮೊದಲಿಗೆ ಮೇಲ್ಸೇತುವೆಯನ್ನು ನಿರ್ಮಿಸಿ’ ಎಂದರು.

ಮಂಗಳೂರು ಕ್ಷೇತ್ರ ಕಾಂಗ್ರೇಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಕೇಂದ್ರದಲ್ಲಿ ಲೋಕಪಾಲ ಜಾರಿಯಾಗುತ್ತಿಲ್ಲ, ಅದು ಜಾರಿಯಾದಲ್ಲಿ ಭ್ರಷ್ಟಾಚಾರಗಳು ಹೊರಬರುತ್ತದೆ ಅನ್ನುವ ಭೀತಿ ಇದ್ದು, ನೆಹರೂ ಕುಟುಂಬದ ಮೇಲೆ ಆರೋಪಿಸುವ ಬಿಜೆಪಿಯವರು ಒಬ್ಬರಾದರೂ ದೇಶದ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋದವರು ಇದ್ದಾರೆಯೇ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಹಿಂದುಳಿದ ವರ್ಗಗಳ ಮುಖಂಡ ಸದಾಶಿವ ಉಳ್ಳಾಲ್, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಎನ್.ಎಸ್.ಕರೀಂ, ಮಂಗಳೂರು ಕ್ಷೇತ್ರ ಉಸ್ತುವಾರಿ ರಾಜಶೇಖರ್ ಕೋಟ್ಯಾನ್, ಮುಖಂಡರಾದ ಮರಿಯಮ್ಮ ಥೋಮಸ್, ಯು.ಎಚ್.ಖಾಲಿದ್ ಉಜಿರೆ, ಹುಸೈನ್ ಕುಂಞಮೋನು, ಸುರೇಶ್ ಭಟ್ನಗರ, ಅಹಮ್ಮದ್ ಬಾವಾ ಕೊಟ್ಟಾರ, ಬಾಝಿಲ್ ಡಿಸೋಜ, ಆಲ್ವಿನ್ ಡಿಸೋಜ, ದಿನೇಶ್ ಕುಂಪಲ, ಸುರೇಖಾ ಚಂದ್ರಹಾಸ್, ಕ್ಲೇರಾ ಕುವೆಲ್ಲೋ, ಉಸ್ಮಾನ್ ಕಲ್ಲಾಪು, ಯು.ಎ. ಇಸ್ಮಾಯಿಲ್‌ ಇದ್ದರು

ಮಂಗಳೂರು ಕ್ಷೇತ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಹಿಮಾನ್ ಕೋಡಿಜಾಲ್ ಸ್ವಾಗತಿಸಿ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಝರ್ ಶಾ ಪಟ್ಟೋರಿ ಕಾರ್ಯಕ್ರಮ ನಿರೂಪಿ ಸಿದರು. ದೇವಕಿ ಉಳ್ಳಾಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.