ಶೃಂಗೇರಿ: ‘ಜಾನಪದವು ಸಾಮಾಜಿಕ ವ್ಯವಸ್ಥೆಯನ್ನು ಸೂಚಿಸುತ್ತದೆ. ಜಾನಪದ ಸಂಸ್ಕೃತಿಯ ಹಿರಿಮೆ ಮಹತ್ತರವಾಗಿದೆ' ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಹೇಳಿದರು.
ಶೃಂಗೇರಿ ಮೆಣಸೆಯ ಶಾಸಕರ ಮಾದರಿ ಸರ್ಕಾರಿ ಪ್ರಾಥಮಿಕ ಶಾಲಾ ಅವರಣದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ ಜಿಲ್ಲಾ ಮಟ್ಟದ ಪ್ರಥಮ ಜಾನಪದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದಿನ ಫ್ಯಾಷನ್ ಮುಂದಿನ ಜಾನಪದ. ಸಾಹಿತ್ಯ, ಕಲೆ, ನೃತ್ಯ ಇತ್ಯಾದಿ ಪ್ರಕಾರಗಳನ್ನು ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಡೊಳ್ಳು ಕುಣಿತ, ಕಂಸಾಳೆ, ನಂದಿಕೋಲು ಕುಣಿತ, ಕರಡಿ ಮಜಲು ಇತ್ಯಾದಿಗಳು ನಮ್ಮ ಸಾಂಸ್ಕೃತಿಕ ನೆಲೆಗಟ್ಟಿನ ಮೂಲಬೇರು’ ಎಂದರು.
ಕನ್ನಡ ನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡು ಮರೆಯಾಗುವ ಮುನ್ನ ಅದನ್ನು ಒಗ್ಗೂಡಿಸಿ ಕಾಪಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಪಾಶ್ಚಾತ್ಯ ಸಂಸ್ಕೃತಿಯನ್ನು ನೆಚ್ಚಿಕೊಂಡಿರುವ ಅಧುನಿಕ ಸಮಾಜ, ಜಾನಪದ ಮೌಲ್ಯವನ್ನು ಉಳಿಸಿ ಬೆಳೆಸುವತ್ತ ಗಮನ ನೀಡಬೇಕು. ಸಾವಿರಾರು ವರ್ಷಗಳಿಂದ ಮಣ್ಣಿನ ಸಂಸ್ಕೃತಿಯ ಸಾರವಾಗಿ ಜನಪದ ಬೆಳೆದಿದೆ. ಸಂಸ್ಕೃತಿಯ ಬೇರಿನಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಜನಪದ ಮನಸ್ಸಿಗೆ ಮುದ ನೀಡುವ ಅಪೂರ್ವ ಕಲೆ' ಎಂದರು.
ಸಮ್ಮೇಳನದ ಅಧ್ಯಕ್ಷ ಅಂಟಿಗೆ ಪಿಂಟಿಗೆ ಕಲಾವಿದ ಸುರೇಂದ್ರ ಯಡದಾಳು ಮಾತನಾಡಿ, ‘ಜಾನಪದ ಜೀವಂತ ಕಲೆ ಮತ್ತು ಸಂಪ್ರದಾಯ. ಯಾವುದೇ ಲಿಪಿ, ಬರಹ, ಕೃತಿ, ಶಾಸನ ಇಲ್ಲದೆ ಆನಾದಿಯಿಂದಲೂ ಉಳಿದು ಬಂದ ನಮ್ಮ ಪೂರ್ವಿಕರ ಬೆಲೆ ಕಟ್ಟಲಾಗದ ಸಂಪತ್ತು ಜಾನಪದ. ಜಾನಪದ ಹಾಡಿನ ಸೋಗಡೇ ಬೇರೆ. ಆಧುನಿಕ ಜಗತ್ತಿನಲ್ಲಿ ಹಣ ತುಂಬಿಸುವ ಕಣಜ ಕಟ್ಟಬೇಕು ಎಂಬ ಮನಸ್ಥಿತಿಯಾದರೆ, ಜಾನಪದವು ಮನುಷ್ಯ ಸಂಬಂಧ ಮತ್ತು ಸಂಸ್ಕೃತಿ ಉಳಿಸುತ್ತದೆ. ಜಾನಪದವನ್ನು ಅಳಿವಿನ ಅಂಚಿಗೆ ದೂಡಿದರೆ ಮಾನವೀಯತೆಯ ಮೌಲ್ಯ, ಕರುಳ ಕುಡಿಯ ಸಂಬಂಧ ಮತ್ತು ಸೌಹರ್ದ ಭಸ್ಮವಾದಂತೆ’ ಎಂದರು.
ಕನ್ನಡ ಜಾನಪದ ಪರಿಷತ್ನ ರಾಜ್ಯ ಘಟಕದ ಅಧ್ಯಕ್ಷ ಮಾತನಾಡಿ, ‘ಜಾನಪದ ತತ್ವ ಪದಗಳು ಬರವಣಿಗೆಯ ಮೂಲಕ ಚಾಲ್ತಿಗೆ ಬಂದಿದೆ. ರಾಜಕೀಯ ನಮ್ಮೆಲ್ಲರ ಮನಸ್ಸುಗಳನ್ನು ಒಡೆಯುತ್ತಿದೆ. ಆದರೆ, ಜಾನಪದ ಸಂಸ್ಕೃತಿ ಮನಸ್ಸುಗಳನ್ನು ಒಗ್ಗೂಡಿಸುತ್ತದೆ’ ಎಂದರು.
ಸಭಾ ಕಾರ್ಯಕ್ರಮದ ಮುನ್ನ ರಾಷ್ಟ್ರ ಧ್ವಜಾರೋಹಣ, ನಾಡ ಧ್ವಜಾರೋಹಣ ಮತ್ತು ಪರಿಷತ್ ಧ್ವಜಾರೋಹಣ ನಡೆಯಿತು. ಶೃಂಗೇರಿ ಶಾರದಾ ಪೀಠದ ಗುರುಗಳ ಆಪ್ತ ಸಹಾಯಕ ಕೃಷ್ಣಮೂರ್ತಿ ಭಟ್, ಸಮ್ಮೇಳನದ ಅಧ್ಯಕ್ಷ ಸುರೇಂದ್ರ ಯಡದಾಳು ಮೆರವಣಿಗೆಗೆ ಚಾಲನೆ ನೀಡಿದರು. ಶಾರದಾ ಮಠದಿಂದ ಮೆಣಸೆ ಮೆರವಣಿಗೆ ನಡೆಯಿತು. ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಶಾರದಾ ಮಠದಿಂದ ಮಾಡಲಾಗಿತ್ತು. ಸಮ್ಮೇಳನದಲ್ಲಿ ಜಾನಪದ ಗೋಷ್ಠಿ, ಕಲಾ ಪ್ರದರ್ಶನ, ಬಹಿರಂಗ ಅಧೀವೇಶನ ನಡೆಯಿತು.
ಪರಿಷತ್ ರಾಜ್ಯ ಕಾರ್ಯದರ್ಶಿ ಕೆ.ಎಸ್ ಕೌಜಲಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ನಾಯ್ಕ, ಉಪಾಧ್ಯಕ್ಷೆ ಭಾಗ್ಯ ಕೌಶಿಕ್, ಸ್ವಾಗತ ಸಮಿತಿ ಅಧ್ಯಕ್ಷ ಎ.ಎಸ್ ನಯನ, ಹಣಕಾಸು ಸಮಿತಿ ಅಧ್ಯಕ್ಷ ಟಿ.ಟಿ ಕಳಸಪ್ಪ, ಎಸ್ಡಿಎಂಸಿ ಅಧ್ಯಕ್ಷ ಉದಯ್ ಮೆಣಸೆ, ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಆಶೀಶ್ ದೇವಾಡಿಗ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಮಂಜುನಾಥ್, ಗೌರವ ಸಲಹೆಗಾರ ಶೈಲಜಾ ರತ್ನಾಕರ್ ಹೆಗ್ಡೆ, ಪುಷ್ಪ ಲಕ್ಷ್ಮೀನಾರಯಣ್, ನಾಗೇಶ್ ಕಾಮತ್, ಸಹ ಕಾರ್ಯದರ್ಶಿ ಹೆಗ್ಗದ್ದೆ ಶಿವಾನಂದರಾವ್, ಕುಂಚೂರು ಶ್ರೀನಿವಾಸ್ ಗೌಡ, ಶೂನ್ಯ ರಮೇಶ್, ಮೋಹನ್ ಬೋಳೂರು, ಎಚ್.ಎ ಪ್ರಕಾಶ್, ಸುನೀತಾ ನವೀನ್ ಗೌಡ, ಜಗದೀಶ್ ಕಣದಮನೆ ಇದ್ದರು.
ಸಾಹಿತ್ಯಕ್ಕೆ ಬದುಕನ್ನು ಉತ್ತಮವಾಗಿ ರೂಪಿಸುವ ಶಕ್ತಿ ಇದೆ. ಜಾನಪದ ಸಂಸ್ಕೃತಿಯಲ್ಲಿ ಆಡಂಬರವಿಲ್ಲ ಸಂಭ್ರಮವಿದೆ. ಅದು ಜ್ಞಾನ ತುಂಬಿದ ಪದ.-ಒಣಿತೋಟ ರತ್ನಾಕರ್ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ
‘ಸಂಸ್ಕೃತಿಯ ಅಸ್ಮಿತೆ’
‘ನಮ್ಮ ಸಂಸ್ಕೃತಿಯ ಅಸ್ಮಿತೆಯಾದ ಜಾನಪದ ಕಲಾ ಪ್ರಕಾರ ಗ್ರಾಮೀಣ ಸೊಗಡನ್ನು ತೆರೆದಿಡುವಲ್ಲಿ ಯಶಸ್ಸು ಗಳಿಸಿದೆ. ಅದನ್ನು ಎಲ್ಲರೂ ಸಮಾನ ಮನಸ್ಸಿನಿಂದ ಒಗ್ಗೂಡಿ ಉಳಿಸಿದಾಗ ನಮ್ಮ ಸಾಂಸ್ಕೃತಿಕ ನೆಲೆಗಟ್ಟಿನ ಬೆಳವಣಿಗೆಗೆ ಪೂರಕವಾಗುತ್ತದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.