
ಕೊಪ್ಪ: ಆಧಾರ್ ಕಾರ್ಡ್ ನವೀಕರಣ, ತಿದ್ದುಪಡಿಗಾಗಿ ಪಟ್ಟಣದಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿನ ಆಧಾರ್ ಕೇಂದ್ರದ ಎದುರು ಜನರು ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ.
ಈ ಹಿಂದೆ ಕೊಪ್ಪದ ಎಸ್ಬಿಐ ಬ್ಯಾಂಕ್, ಬಿಎಸ್ಎನ್ಎಲ್ ಕಚೇರಿಯಲ್ಲಿ ಆಧಾರ್ ತಿದ್ದುಪಡಿ ಹಾಗೂ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈದೀಗ ಎಲ್ಲಾ ಸೇವಾ ಕೇಂದ್ರಗಳು ಬಂದ್ ಆಗಿ ಅಂಚೆ ಕಚೇರಿಯಲ್ಲಿ ಮಾತ್ರ ವಾರದಲ್ಲಿ ಒಂದು ದಿನ ಮಾತ್ರ ಸೇವೆ ಲಭ್ಯವಿದೆ. ಇದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ.
‘ಅಂಚೆ ಕಚೇರಿ ಮುಂದೆ ಆಧಾರ್ ಕಾರ್ಡ್ ನವೀಕರಣಕ್ಕಾಗಿ ಮಕ್ಕಳನ್ನು ಕರೆದುಕೊಂಡು ಬಂದು ಗಂಟೆಗಟ್ಟಲೆ ನಿಂತರೂ ಕೆಲಸವಾಗದೆ ವಾಪಸ್ ತೆರಳುವ ಪರಿಸ್ಥಿತಿ ಇದೆ’ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಪ್ರಧಾನ ಅಂಚೆ ಕಚೇರಿಯಲ್ಲಿ ವಾರದಲ್ಲಿ ಒಂದು ದಿನ (ಗುರುವಾರ) ಮಾತ್ರ ಆಧಾರ್ ಸೇವೆ ಲಭ್ಯವಿದ್ದು, ಅದೂ ಕೆಲವೇ ಗಂಟೆಗಳಿಗೆ ಸೀಮಿತಗೊಂಡಿದೆ. ನಾಗರಿಕ ಸೇವಾ ಕೇಂದ್ರ ಅಥವಾ ಅಲ್ಪಸಂಖ್ಯಾತ ಮಾಹಿತಿ ಕೇಂದ್ರದಲ್ಲಿ ಆಧಾರ್ ಸೇವಾ ಕೇಂದ್ರ ತೆರೆದಲ್ಲಿ ತುಂಬಾ ಅನುಕೂಲ. ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ನಿವಾರಿಸಬೇಕು' ಎಂದು ಸಾಮಾಜಿಕ ಕಾರ್ಯಕರ್ತ ಜುಬೇರ್ ಅಹ್ಮದ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.