
ಬೀರೂರು (ಕಡೂರು): ತಾಲ್ಲೂಕಿನ ಬೀರೂರು ಪಟ್ಟಣದಲ್ಲಿ ನ.2, 3ರಂದು ನಡೆಯಲಿರುವ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮಜಾಗೃತಿ ಭಾವೈಕ್ಯ ಸಮಾರಂಭಕ್ಕೆ ಕಡೂರು ನಾಗರಿಕರು ಮತ್ತು ಪುರಸಭೆ ವತಿಯಿಂದ ಸಹಕಾರ ನೀಡುವುದಾಗಿ ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ರಂಭಾಪುರಿ ಖಾಸಾ ಶಾಖಾಮಠದಲ್ಲಿ ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿಮಾಡಿ ಮಾತನಾಡಿದರು.
ಈ ಹಿಂದೆ ತಾಲ್ಲೂಕು ಕೇಂದ್ರದಲ್ಲಿ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ದಸರಾ ದರ್ಬಾರ್ ಕಾರ್ಯಕ್ರಮಗಳು ಭಕ್ತರ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ. ಅಂದು ಬೀರೂರು ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮಗಳ ಭಕ್ತರು ಸಹಕಾರ ನೀಡಿ ಕಡೂರಿನ ಧಾರ್ಮಿಕ ಸಾಮರಸ್ಯದ ಪರಂಪರೆಯ ಮಹತ್ವಕ್ಕೆ ಮೆರುಗು ನೀಡಿದ್ದಾರೆ. ಎರಡು ದಶಕಗಳ ನಂತರ ಬೀರೂರು ಪಟ್ಟಣದಲ್ಲಿ ದಸರಾ ದರ್ಬಾರ್ ನಂತರ ದೊಡ್ಡ ಧಾರ್ಮಿಕ ಕಾರ್ಯಕ್ರಮ ಆಯೋಜನೆಗೊಂಡಿದೆ. ರಂಭಾಪುರಿ ಖಾಸಾ ಶಾಖಾಮಠ ಹಾಗೂ ಗುರುಗಳಾದ ರುದ್ರಮುನಿ ಶಿವಾಚಾರ್ಯ ಶ್ರೀಯವರು ಕೈಗೊಂಡಿರುವ ಧರ್ಮ ಸಂರಕ್ಷಣೆಗಾಗಿನ ಕಾರ್ಯಕ್ರಮಗಳು ಕಡೂರಿನ ಹಿರಿಮೆಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ರೂಪುರೇಷೆಯ ಮಾಹಿತಿ ನೀಡಿದ ರುದ್ರಮುನಿ ಶಿವಾಚಾರ್ಯ ಶ್ರೀ, ಭಕ್ತರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಲಿದೆ. ಮಂಗಳಮಂದಿರ ಉದ್ಘಾಟನೆ, ಧರ್ಮಜಾಗೃತಿ ಸಮಾವೇಶ ಮತ್ತು ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಆಶಿಸಿ, ಶ್ರೀನಿವಾಸ್ ಅವರಿಗೆ ಆಹ್ವಾನ ಪತ್ರಿಕೆ ನೀಡಿ ಸಹಕಾರ ನೀಡುವಂತೆ ಕೋರಿದರು.
ಬೀರೂರು ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸದಸ್ಯ ಬಿ.ಆರ್.ಮೋಹನ್ಕುಮಾರ್, ಕಡೂರು ಪುರಸಭೆ ಸದಸ್ಯ ಮರುಗುದ್ದಿ ಮನು, ತಿಪ್ಪೇಶ್, ಶಂಕರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.