ADVERTISEMENT

ಬೀರೂರು | ಬಿತ್ತನೆ ಕಾರ್ಯದತ್ತ ಅನ್ನದಾತರ ಚಿತ್ತ

ಬಯಲುನಾಡಿನಲ್ಲಿ ಮುಂಗಾರು ಆರಂಭದ ಸೂಚನೆ

ಎನ್‌.ಸೋಮಶೇಖರ
Published 3 ಜೂನ್ 2020, 11:31 IST
Last Updated 3 ಜೂನ್ 2020, 11:31 IST
ಬೀರೂರು ಹೋಬಳಿ ಮುದ್ದಾಪುರ ಎರೆ ಬಯಲಿನಲ್ಲಿ ಮಂಗಳವಾರ ರೈತರು ಮೋಡಕವಿದ ವಾತಾವರಣದಲ್ಲಿ ಈರುಳ್ಳಿ ಬಿತ್ತನೆಗೆ ಗದ್ದೆಯನ್ನು ಹದ ಮಾಡುತ್ತಿರುವುದು
ಬೀರೂರು ಹೋಬಳಿ ಮುದ್ದಾಪುರ ಎರೆ ಬಯಲಿನಲ್ಲಿ ಮಂಗಳವಾರ ರೈತರು ಮೋಡಕವಿದ ವಾತಾವರಣದಲ್ಲಿ ಈರುಳ್ಳಿ ಬಿತ್ತನೆಗೆ ಗದ್ದೆಯನ್ನು ಹದ ಮಾಡುತ್ತಿರುವುದು   

ಬೀರೂರು: ವಾರ್ಷಿಕ ಮುಂಗಾರು 2020ನೇ ಸಾಲಿನಲ್ಲಿ ಮುಂಚಿತವಾಗಿ ಯೇ ಆರಂಭವಾಗುವ ಲಕ್ಷಣಗಳಿದ್ದು, ಮಳೆ ಆಧಾರಿತ ಬಯಲುಸೀಮೆಯ ಕೃಷಿಕರು ಭೂಮಿ ಹದಗೊಳಿಸಿ ಬಿತ್ತನೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ.

ಬಯಲುನಾಡಿನ ಮುಂಗಾರು ಸಂಪ್ರದಾಯದಂತೆ ಈರುಳ್ಳಿ, ಉದ್ದು, ಎಳ್ಳು ಮತ್ತು ಶೇಂಗಾ ಸದ್ಯದ ಮಟ್ಟಿಗೆ ಹೆಚ್ಚು ಬಿತ್ತನೆಯಾಗಿರುವ ಬೆಳೆಗಳಾಗಿದ್ದು, ಮುಂದಿನ ದಿನಗಳಲ್ಲಿ ಮೆಕ್ಕೆಜೋಳ ಮತ್ತು ರಾಗಿ ಒಟ್ಟಾರೆ ಕೃಷಿ ಪ್ರದೇಶದ ಸಿಂಹಪಾಲು ಆಕ್ರಮಿಸಲಿವೆ. ಸೂರ್ಯಕಾಂತಿ ಕ್ರಮೇಣ ಬೇಡಿಕೆ ಕಳೆದುಕೊಳ್ಳುತ್ತಿದ್ದು, ಕೃಷಿ ಇಲಾಖೆ ನಿಗದಿಪಡಿಸಿದ ಗುರಿ ಮುಟ್ಟುವಲ್ಲಿ ಮಾತ್ರ ಸಫಲವಾಗುತ್ತಿದೆ.

ಕೊರೊನಾ ಭೀತಿ ಕೃಷಿ ಚಟುವಟಿ ಕೆಗಳಿಗೆ ಹಿಂಜರಿಕೆ ಉಂಟು ಮಾಡುವ ಸನ್ನಿವೇಶ ಇಲ್ಲ. ಕಳೆದ ವಾರದಿಂದ ಬೀರೂರು ಹೋಬಳಿ ಮತ್ತು ಕಡೂರು ತಾಲ್ಲೂಕಿನ ಅಲ್ಲಲ್ಲಿ ಹದ ಮಳೆ ಯಾಗಿದ್ದು, ಮೋಡ ಕಟ್ಟಿದ ವಾತಾ ವರಣ ಮಳೆ ಮುಂದುವರಿಯುವ ಸೂಚನೆ ನೀಡುತ್ತಿದೆ. ಇದರಿಂದ ಉತ್ಸಾಹಗೊಂಡಿರುವ ರೈತರು ಹದ ಗೊಳಿಸಿದ ತಮ್ಮ ಜಮೀನುಗಳತ್ತ ಮುಖ ಮಾಡುತ್ತಿದ್ದಾರೆ.

ADVERTISEMENT

ಬೀರೂರು ಸುತ್ತಮುತ್ತ ಶೇಂಗಾ ಬಿತ್ತನೆ ಪೂರ್ಣಗೊಂಡಿದ್ದು, ಕಳೆದ ವಾರ ಮತ್ತು ಭಾನುವಾರ ರಾತ್ರಿ ಬಂದ ಮಳೆ ಎರೆ ಬಯಲಿನಲ್ಲಿ ಈರುಳ್ಳಿ ಬಿತ್ತನೆಗೆ ಇಂಬು ನೀಡಿದ್ದು, ಭರದ ಸಿದ್ಧತೆಗಳು ನಡೆದಿವೆ. ಬಿತ್ತನೆಗೆ ಸಿದ್ಧವಾಗಿದ್ದ ಭೂಮಿಯಲ್ಲಿ ಮಂಗಳವಾರ ನೂರಾರು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದ ದೃಶ್ಯ ಕಂಡು ಬಂತು.

‘ಸದ್ಯ ಈರುಳ್ಳಿ ಬಿತ್ತನೆ ಬೀಜದ ದರದ ಏರುಮುಖವಾಗಿದ್ದು, ಸೀಮೆ ಯಲ್ಲಿ ಪದ್ಧತಿ ಇರುವ ಸೇರಿನ ಅಳತೆಗೆ ₹ 1,500 ತಲುಪಿದೆ. ಒಂದು ಎಕರೆ ಭೂಮಿಗೆ ಅಂದಾಜು ಏಳರಿಂದ ಎಂಟು ಸೇರು ಬಿತ್ತನೆ ಬೀಜದ ಅವಶ್ಯಕತೆ ಇದ್ದು, 2 ಚೀಲ ಡಿಎಪಿ ಗೊಬ್ಬರ, 2 ಬೇಸಾಯ, 3 ಆಳುಗಳು ಸೇರಿ ಬಿತ್ತನೆ ಹಂತದಲ್ಲಿಯೇ ₹ 15 ಸಾವಿರ ಖರ್ಚು ಮಾಡಬೇಕಿದೆ. ನಂತರ ದಿನಗಳಲ್ಲಿ ಕಳೆ, ಅಗತ್ಯ ಬಿದ್ದರೆ ಔಷಧ ಸಿಂಪಡಣೆ ಮೊದಲಾದ ವೆಚ್ಚಗಳು ಸೇರಿ ಒಟ್ಟಾರೆ ₹ 30 ಸಾವಿರ ವಿನಿಯೋಗಿಸಬೇಕಾಗುತ್ತದೆ’ಎನ್ನುತ್ತಾರೆ ಬೆಳೆಗಾರ ನಾಗರಾಜ್.

‘ಅಕ್ಕಡಿ ಸಾಲಿನಲ್ಲಿ ಬೆಳೆದ ಮೆಣಸಿನಕಾಯಿ, ಕುಸುಬೆ, ಸಣ್ಣ ಪುಟ್ಟ ತರಕಾರಿಗಳು ಮನೆಯ ಪಾಲಾಗುತ್ತವೆ. ಈರುಳ್ಳಿ ಬೆಳೆ ವಿಷಯವಾಗಿ ಬಿತ್ತನೆ ಬೀಜದಿಂದ ಹಿಡಿದು ಎಲ್ಲ ಸಾಮಗ್ರಿಗಳಿಗೂ ರೈತರು ಖಾಸಗಿಯವರನ್ನೇ ಅವಲಂಬಿಸಬೇಕಿದೆ. ತೋಟಗಾರಿಕೆ ಇಲಾಖೆಯಿಂದ ಈರುಳ್ಳಿ ಬೆಳೆಗಾರರಿಗೆ ದೊರಕುವ ಸಹಾಯ ನಗಣ್ಯ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.