ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಫಿ ಮತ್ತು ಅಡಿಕೆ ಬೆಳೆಗಳ ಕೊಳೆರೋಗ ನಿರ್ಮೂಲನೆಗೆ ಕೃತಕ ಬುದ್ದಿಮತ್ ತೆ(ಎಐ)ಆಧಾರಿತ ತಂತ್ರಜ್ಞಾನ ಬಳಸಲು ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಹಾಸನ ಮೆಗಾ ಫುಡ್ ಪಾರ್ಕ್ ಸಿಇಒ ಅಶೋಕ್ ಮನವಿ ಮಾಡಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಫಿ ಮತ್ತು ಅಡಿಕೆ ಬೆಳೆಗಳು ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ. ಜಿಲ್ಲೆಯ 9 ತಾಲ್ಲೂಕುಗಳ ಪೈಕಿ ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಕೊಪ್ಪ, ಎನ್.ಆರ್.ಪುರ ತಾಲ್ಲೂಕುಗಳಲ್ಲಿ ಕಾಫಿ ಪ್ರಮುಖ ಬೆಳೆಯಾಗಿದ್ದರೆ, ತರೀಕೆರೆ, ಕಡೂರು, ಅಜ್ಜಂಪುರ, ಶೃಂಗೇರಿ ತಾಲ್ಲೂಕುಗಳಲ್ಲಿ ಅಡಿಕೆ ಪ್ರಮುಖ ಬೆಳೆಯಾಗಿದೆ ಎಂದರು.
ಶೃಂಗೇರಿ ತಾಲ್ಲೂಕಿನಲ್ಲಿ ಅಡಿಕೆಗೆ ಹಳದಿ ರೋಗ ಅತಿ ಹೆಚ್ಚು ಭಾದಿಸಿದೆ. ಉಳಿದ ಎಲ್ಲ ತಾಲ್ಲೂಕುಗಳಲ್ಲಿ ಕಾಫಿ ಮತ್ತು ಅಡಿಕೆ ಬೆಳೆಗಳಿಗೆ ಕೊಳೆರೋಗ ಸಾಮಾನ್ಯವಾಗಿದೆ. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಕಾಫಿ ಬೆಳೆಗಾರ ಜಾನ್ ಸಂತೋಷ ಅವರ ಜೊತೆಗಿನ ಕೊಳೆರೋಗದ ಮಾತುಕತೆ ಮತ್ತು ಇತರೆ ರೈತರೊಂದಿಗಿನ ಸಂವಾದ ನಾವು ಕೊಳೆರೋಗಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎನ್ನುವ ನಿರ್ಧಾರಕ್ಕೆ ಬಂದೆವು ಎಂದರು.
ನಾನು ಈ ವರ್ಷದ ಫೆಬ್ರವರಿಯಲ್ಲಿಯೇ ಇಸ್ರೇಲ್ನಿಂದ ಸಸ್ಯ ಶಾಸ್ತ್ರಜ್ಞರನ್ನು ಕರೆಸಿ ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆಯ ಕೊಟ್ಟಿಗೆಹಾರದ ಬಳಿ ಇರುವ ಒಂದು ಕಾಫಿ ತೋಟಕ್ಕೆ ಕರೆದುಕೊಂಡು ಹೋಗಿ ಏನು ಪ್ರಮುಖ ಕಾರಣ ಇರಬೇಕು ಎಂದು ಅಡಿಕೆ ಮತ್ತು ಕಾಫಿ ಎರಡನ್ನು ಪರಿಶೀಲನೆ ಮಾಡಿಸಿ ಕಾರಣ ಪತ್ತೆ ಹಚ್ಚುವಲ್ಲಿ ಸಫಲರಾದೆವು ಎಂದರು.
ಕಳೆದ 6 ತಿಂಗಳಿಂದ ಸತತ ಅಧ್ಯಯನ ನಡೆಸಿ ಕೃತಕ ಬುದ್ದಿಮತ್ತೆ ಆಧಾರಿತ ತಂತ್ರಜ್ಞಾನ ಸಿದ್ಧಪಡಿಸಲಾಗಿದೆ. ಆದರೆ ಈ ತಂತ್ರಜ್ಞಾನವು ಯುಎಸ್ ಮತ್ತು ಇಸ್ರೇಲ್ನಲ್ಲಿ ಸಿದ್ಧಗೊಂಡಿರುವ ಕಾರಣ ಜಿಲ್ಲಾಡಳಿತದ ಅನುಮತಿ ಅವಶ್ಯಕತೆ ಇರುತ್ತದೆ. ಜಿಲ್ಲಾಡಳಿತ ಅನುಮತಿ ಕೊಟ್ಟರೆ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿ ಕೊಳೆರೋಗ ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.