ಅಜ್ಜಂಪುರ: ‘ನಾಲ್ಕು ವರ್ಷದ ಹಿಂದೆ ಅಕ್ರಮ-ಸಕ್ರಮ ಯೋಜನೆಯಡಿ ಹಣ ಪಾವತಿಸಿದ್ದರೂ, ಕೃಷಿ ಪಂಪ್ನೆಟ್ಗೆ ವಿದ್ಯುತ್ ಸಂಪರ್ಕ ಕಾಮಗಾರಿ ಆರಂಭಗೊಳಿಸಿಲ್ಲ. ಜನಸಂಪರ್ಕ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಚನ್ನಾಪುರದ ರೈತ ಕುಮಾರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ಸೋಮವಾರ ನಡೆದ ‘ಜನ ಸಂಪರ್ಕ ಸಭೆ’ಯಲ್ಲಿ ಅವರು ಪ್ರಶ್ನಿಸಿದರು.
‘ಗುತ್ತಿಗೆದಾರರು ಜೇಷ್ಠತೆ ಆಧಾರದಲ್ಲಿ ಕಾಮಗಾರಿ ನಡೆಸಬೇಕಿತ್ತು. ಆದರೆ, ಈವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಮೆಸ್ಕಾಂ ಎಇಇ ಚಂದ್ರಪ್ಪ ಉತ್ತರಿಸಿದರು.
‘ಕೃಷಿ ಪಂಪ್ ಸೆಟ್ಗೆ ದಿನಕ್ಕೆ 7 ಗಂಟೆ ತ್ರೀ-ಫೇಸ್ ವಿದ್ಯುತ್ ಪೂರೈಸುವುದಾಗಿ ತಿಳಿಸಿದ್ದೀರಿ. ಆದರೆ, ವಿದ್ಯುತ್ ನೀಡಿಕೆಯಲ್ಲಿ ಅನೇಕ ಬಾರಿ ವ್ಯತ್ಯಯ ಮಾಡುತ್ತೀರಿ. ಇದರಿಂದ ತೋಟಗಳಿಗೆ ನೀರು ಪೂರೈಸಲು ತೊಂದರೆಯಾಗುತ್ತಿದೆ’ ಎಂದು ಎಂ.ಹೊಸಹಳ್ಳಿ ರೈತ ಮಂಜುನಾಥ್ ಅಳಲು ತೋಡಿಕೊಂಡರು.
ಕುರುಬರಹಳ್ಳಿ ಗ್ರಾಮದಲ್ಲಿನ ವಿದ್ಯುತ್ ಪರಿವರ್ತಕದಿಂದ ವಿದ್ಯುತ್ ಕಂಬದವರೆಗೆ ಜೋತು ಬಿದ್ದಿರುವ ವಿದ್ಯುತ್ ತಂತಿ ಸರಿಪಡಿಸುವಂತೆ ನಿವಾಸಿ ರುದ್ರಪ್ಪ ಮನವಿ ಮಾಡಿದರು.
ಕೋಟೆ ಬೇಗೂರಣ್ಣನವರ ವಟಾರ ಬಳಿ ರಸ್ತೆ ಮದ್ಯದಲ್ಲಿರುವ ವಿದ್ಯುತ್ ಕಂಬ ಸ್ಥಳಾಂತರಿಸುವಂತೆ ಮಂಜಣ್ಣ ಕೋರಿದರು.
ಮೆಸ್ಕಾಂನ ಸಂತೋಷ್, ಕಿರಣ್ ಕುಮಾರ್, ನಾಗರಾಜು, ಪರಮೇಶ್ವರಪ್ಪ, ಭವ್ಯಾ ಇದ್ದರು.
ವಿದ್ಯುತ್ ವ್ಯತ್ಯಯ ನಾಳೆ
ಅಜ್ಜಂಪುರ: ಅಜ್ಜಂಪುರ ಮತ್ತು ಶಿವನಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಇದೇ 29ರಂದು ತ್ರೈಮಾಸಿಕ ಕಾರ್ಯವಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಅಜ್ಜಂಪುರ ಟೌನ್, ಕಾಟಿಗನರೆ, ಚನ್ನಾಪುರ, ನಾರಣಾಪುರ, ಚಿಕ್ಕಾನವಂಗಲ, ಸೊಕ್ಕೆ. ಗೊಂಡೇದಹಳ್ಳಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.