ಅಜ್ಜಂಪುರ: ‘ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಳಿಗೆಯ ಹರಾಜು ಪಟ್ಟಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲರಿಗೆ ತಾರತಮ್ಯ ಎಸಗಲಾಗಿದೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲ್ಲೂಕು ಘಟಕ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದಲ್ಲಿ ಪಟ್ಟಣ ಪಂಚಾಯಿತಿಯ 31 ಮಳಿಗೆಗಳಿದ್ದು, ನೆಲಮಹಡಿಯ ಕ್ರಮ ಸಂಖ್ಯೆ 17ನೇ ಮಳಿಗೆಯನ್ನು ಪರಿಶಿಷ್ಟ ಜಾತಿಗೆ, 18ನೇ ಮಳಿಗೆಯನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿದೆ. ಈ ಎರಡೂ ಮಳಿಗೆಗಳು ವಿಸ್ತೀರ್ಣದಲ್ಲಿ ಚಿಕ್ಕವಿದ್ದು, ವ್ಯಾಣಿಜ್ಯ ವ್ಯವಹಾರಕ್ಕೆ ಯೋಗ್ಯವಾಗಿಲ್ಲ ಎಂದು ದೂರಿದ್ದಾರೆ.
‘ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಯಾವುದೋ ಮುಲಾಜಿಗೆ ಒಳಗಾಗಿ ಪರಿಶಿಷ್ಟ ಜಾತಿ, ಪಂಗಡ, ಅಂಗವಿಕಲರಿಗೆ ಸಮಾನ ಅವಕಾಶ ಕಲ್ಪಿಸದೇ ತಾರತಮ್ಯ ಮಾಡಿದ್ದಾರೆ. ಕೂಡಲೇ ಮಧ್ಯೆ ಪ್ರವೇಶಿಸಿ, ಪಟ್ಟಿಯನ್ನು ಪರಿಶೀಲಿಸಬೇಕು. ಆಗಿರುವ ತಾರತಮ್ಯ ನಿವಾರಿಸಲು ಅನ್ಯ ಕ್ರಮಾಂಕದ ಮಳಿಗೆಯನ್ನು ಮೀಸಲಿರಿಸುವ ಮೂಲಕ ನ್ಯಾಯ ಒದಗಿಸಿಕೊಡಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಎಸ್.ಎನ್. ಮಹೇಂದ್ರಸ್ವಾಮಿ ಹಾಗೂ ಮುಖಂಡ ಹೆಬ್ಬೂರು ಶಿವಣ್ಣ ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.