ಆಲ್ದೂರು: ಇತ್ತೀಚೆಗೆ ಮಲೆನಾಡಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ರೈತರು ಮತ್ತು ಸ್ಥಳೀಯರಿಗೆ ತಲೆನೋವಾಗಿ ಪರಿಣಮಿಸಿದೆ. ಕಾಡಾನೆಗಳ ದಾಳಿ ನಿಯಂತ್ರಣ ಅರಣ್ಯ ಇಲಾಖೆಗೆ ಸವಾಲಾಗಿ ಕಾಡುತ್ತಿದೆ.
ಆವತಿ ಹೋಬಳಿಯ ಐದಳ್ಳಿ, ಬೆರಣಗೋಡು, ಕಣತಿ, ನರೋಡಿ, ಹಕ್ಕಿಮಕ್ಕಿ, ಅರೇನೂರು ಗ್ರಾಮಗಳಲ್ಲಿ ಕಾಡಾನೆಗಳು ನಿರಂತರವಾಗಿ ಓಡಾಡುತ್ತಿದ್ದು, ಕೆಲವು ಗ್ರಾಮಗಳ ವ್ಯಾಪ್ತಿಯಲ್ಲಿ ಗುಂಪಾಗಿ ಕಾಣಿಸಿಕೊಳ್ಳುತ್ತಿವೆ.
ಸೋಮವಾರ ರಾತ್ರಿ ಬೆಟ್ಟದಹಳ್ಳಿ ಗ್ರಾಮದ ನಿಂಗೇಗೌಡ ಎಂಬುವರ ತೋಟಕ್ಕೆ ಆನೆಗಳ ಗುಂಪು ದಾಳಿ ಮಾಡಿದ್ದು, ಅಡಿಕೆ, ಬಾಳೆ, ಕಾಫಿ ಬೆಳೆಯನ್ನು ನಾಶಪಡಿಸಿದೆ. ಬಳಿಕ ತೋಟದ ಒಳಗಿದ್ದ ಕೆರೆಯಲ್ಲಿ ಈಜಿ ಸಮೀಪದ ಅರಣ್ಯದ ಪ್ರದೇಶಕ್ಕೆ ತೆರಳಿದೆ.
ವನ್ಯ ಮೃಗ–ಮಾನವನ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ. ಮಲೆನಾಡು ಭಾಗದಲ್ಲಿ ಆನೆಗಳಿಂದ ಭಾರಿ ಪ್ರಮಾಣದ ಬೆಳೆ ನಾಶವಾಗುತ್ತಿದ್ದು, ಜೀವ ಹಾನಿಯೂ ಸಂಭವಿಸಿದೆ. ಆನೆಗಳ ಉಪಟಳದಿಂದ ಜನ ಹೈರಾಣಾಗಿದ್ದಾರೆ. ಸಂಜೆ ವಾಪಸಾಗುವ ಸಾರ್ವಜನಿಕರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಆನೆಗಳ ಭಯದಿಂದಲೇ ಓಡಾಡುವಂತಾಗಿದೆ. ಸಮಸ್ಯೆಗೆ ಕೂಡಲೇ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘದ ಗೌರವಾಧ್ಯಕ್ಷ ಮಹೇಶ್ ಕೆರೆಮಕ್ಕಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಆಲ್ದೂರು ಸಮೀಪದ ಬೆಟ್ಟದಹಳ್ಳಿ ಕಾಫಿ ತೋಟದಲ್ಲಿ ಕಾಡಾನೆಗಳು ಬೆಳೆ ಹಾನಿ ಮಾಡಿರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.