ಆಲ್ದೂರು: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರಂತರ ಆಂಬುಲೆನ್ಸ್ ಸ್ಥಗಿತಗೊಂಡಿದ್ದು, ತುರ್ತು ಸಂದರ್ಭಲ್ಲಿ ರೋಗಿಗಳಿಗೆ ಲಭಿಸದಂತಾಗಿದೆ.
ಆಲ್ದೂರು ಹೋಬಳಿಯ ಜನಸಂಖ್ಯೆ 35 ಸಾವಿರಕ್ಕೂ ಹೆಚ್ಚಿದ್ದು, ವಲಸೆ ಬಂದವರನ್ನು ಸೇರಿಸಿದರೆ ಇನ್ನೂ ಹೆಚ್ಚಿದೆ. ಆಲ್ದೂರು, ವಸ್ತಾರೆ, ಬಸ್ಕಲ್, ಕೂದುವಳ್ಳಿ, ಕೆಳಗೂರು ಸತ್ತಿಹಳ್ಳಿ, ಆಣೂರು, ದೊಡ್ಡಮಾಗರವಳ್ಳಿ, ಮೈಲಿಮನೆ ಸೇರಿದಂತೆ 9ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದರೂ, ತುರ್ತು ಸೇವೆಗಳಿಗೆ ಆಲ್ದೂರಿನ ಈ ಕೇಂದ್ರವನ್ನು ಅವಲಂಬಿಸಿದ್ದಾರೆ.
ಆಲ್ದೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವು 24×7 ಕಾರ್ಯನಿರ್ವಹಿಸುತ್ತಿದ್ದು, ಹೆರಿಗೆ ಸೌಲಭ್ಯ ಇದೆ. ಹೆದ್ದಾರಿ ಅಪಘಾತ ಸಂದರ್ಭದಲ್ಲೂ ತುರ್ತಾಗಿ ಇಲ್ಲಿಗೆ ಬರುತ್ತಾರೆ. ಇಲ್ಲಿನ ನಿರಂತರ ಆಂಬುಲೆನ್ಸ್ ಸೇವೆ ಒದಗಿಸಬೇಕು ಎಂದು ಮುಖಂಡ ಹೆಡದಾಳು ಸಂಪತ್ ಒತ್ತಾಯಿಸಿದ್ದಾರೆ.
ಇಲ್ಲಿರುವ ಆಂಬುಲೆನ್ಸ್ ಕೆಟ್ಟು ನಿಂತು ತಿಂಗಳು ಕಳೆದಿದೆ. ತುರ್ತು ಸಂದರ್ಭಗಳಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸಲು ಸಕಾಲಕ್ಕೆ ಆಂಬುಲೆನ್ಸ್ ಸಿಗದೆ ಪ್ರಾಣಹಾನಿಗಳೂ ಸಂಭವಿಸಿವೆ ಎನ್ನುತ್ತಾರೆ ಸ್ಥಳೀಯರಾದ ಎ.ಯು. ಇಬ್ರಾಹಿಂ, ಅರವಿಂದ್, ಬಿ.ಪಿ.ನಾಗರಾಜ್, ಎ.ಆರ್. ನೀಲೇಶ್ ಪಟೇಲ್. ಪ್ರೇಮ್ ರಾಮ್ ಪಟೇಲ್, ಅವಿನಾಶ್ ಆಚಾರ್ಯ ಮತ್ತಿತರರು.
ಇಲ್ಲಿಗೆ ಆಂಬುಲೆನ್ಸ್ 24X7 ಸೇವೆಯ ಅವಶ್ಯಕತೆ ಇದೆ. ಹೆರಿಗೆ ಸಂದರ್ಭ ರಕ್ತಸ್ರಾವ, ಹೃದಯಾಘಾತ, ಉಸಿರಾಟದ ಸಮಸ್ಯೆ ಸಂದರ್ಭಗಳಲ್ಲಿ ತೀರಾ ಅವಶ್ಯವಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಮಾಡಲಾಗುವುದು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹದೇವಸ್ವಾಮಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.