ನಾಗರಮಕ್ಕಿ (ನರಸಿಂಹರಾಜಪುರ): ‘ಅಮ್ಮ ಪೌಂಡೇಷನ್ನಿಂದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ’ ಎಂದು ಅಮ್ಮ ಪೌಂಡೇಷನ್ ಅಧ್ಯಕ್ಷ ತುಮ್ಕಾನೆ ಸುಧಾಕರ ಎಸ್. ಶೆಟ್ಟಿ ಹೇಳಿದರು.
ನಾಗರಮಕ್ಕಿ ದುರ್ಗಾಪರಮೇಶ್ವರಿ ಸಮುದಾಯ ಭವನದಲ್ಲಿ ಭಾನುವಾರ ಅಮ್ಮ ಪೌಂಡೇಷನ್ ವತಿಯಿಂದ ಆಯೋಜಿಸಿದ್ದ 27ನೇ ಆರೋಗ್ಯ ಉಚಿತ ಶಿಬಿರ ಚಾಲನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಶೃಂಗೇರಿ ಕ್ಷೇತ್ರ ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಹಿಂದುಳಿದಿದೆ. ರಾಜ್ಯದಲ್ಲಿ ಮೂಲಸೌಕರ್ಯ ಕೊರತೆ ಇರುವ ಕ್ಷೇತ್ರಗಳಲ್ಲಿ ಶೃಂಗೇರಿ ಕ್ಷೇತ್ರವೂ ಒಂದಾಗಿದೆ. ಮೂಲ ಸೌಕರ್ಯದ ಕೊರತೆಯಿಂದ ಗ್ರಾಮೀಣ ಭಾಗದ ಅನೇಕ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಸರ್ಕಾರಿ ಶಾಲೆಗಳು ಮುಚ್ಚಿದರೆ ಗ್ರಾಮೀಣ ಭಾಗದ ಬಡವರು, ಹಿಂದುಳಿದವರಿಗೆ ತೊಂದರೆಯಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಅಮ್ಮ ಫೌಂಡೇಷನ್ ವತಿಯಿಂದ 10 ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ಬಡವರಿಗೆ ಆರೋಗ್ಯ ಸೇವೆ ಸಿಗಬೇಕು ಎಂಬುದೇ ಫೌಂಡೇಶನ್ ಮುಖ್ಯ ಉದ್ದೇಶವಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಮಾಡುವುದಿಲ್’ಲ ಎಂದರು.
ನೇತ್ರ ಪರೀಕ್ಷೆ ಮಾಡಿಸಿದ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದರೆ ಅವರನ್ನು ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಗೆ ಕರೆದೊಯ್ದು ಉಚಿತ ಶಸ್ತ್ರ ಚಿಕಿತ್ಸೆ ಮಾಡಿಸಿ, ನಂತರ ಮನೆಗೆ ಕರೆ ತಂದು ಬಿಡಲಾಗುವುದು ಎಂದು ತಿಳಿಸಿದರು.
ಸಮಾರಂಭಕ್ಕೆ ಚಾಲನೆ ನೀಡಿ ಸಹಕಾರ ಧುರೀಣ ಯಡಗೆರೆ ಸುಬ್ರಹ್ಮಣ್ಯ ಮಾತನಾಡಿ, ‘ಅಮ್ಮ ಪೌಂಡೇಷನ್ ಆರೋಗ್ಯ ಕಾರ್ಯಕ್ರಮ ನಡೆಸುವ ಮೂಲಕ ಸಮಾಜದ ಎಲ್ಲರೂ ಆರೋಗ್ಯವಾಗಿರಬೇಕು ಎಂಬ ಆಶಯ ಹೊಂದಿದೆ. 40 ವರ್ಷದ ನಂತರ ಪ್ರತಿಯೊಬ್ಬರೂ ಆರೋಗ್ಯದ ಕಡೆ ಗಮನ ನೀಡಬೇಕು. ಗ್ರಾಮೀಣ ಭಾಗದಲ್ಲಿ ಗಾರ್ಮೆಂಟ್ಸ್ ಪ್ರಾರಂಭಿಸಿದರೆ, ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಫೌಂಡೇಷನ್ನ ಅಧ್ಯಕ್ಷ ಸುಧಾಕರ ಎಸ್ ಶೆಟ್ಟಿ ಮುಂದೆ ಶೃಂಗೇರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಬರಲಿ’ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ‘ಅಮ್ಮ ಫೌಂಡೇಷನ್ ಮೂಲಕ ಸುಧಾಕರ ಎಸ್ ಶೆಟ್ಟಿ ಅವರು ಸಮಾಜ ಸೇವೆ ಮಾಡುತ್ತಿದ್ದು, ಶೃಂಗೇರಿ ಕ್ಷೇತ್ರದ ಶೇ 50ರಷ್ಟು ಜನರಿಗೆ ಅವರ ಸೇವೆ ತಲುಪಿದೆ’ ಎಂದರು.
ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಶಿವದಾಸ್, ಜೆಡಿಎಸ್ ಮುಖಂಡ ಜಯಪುರದ ಶಾಂತಕುಮಾರ್ ಮಾತನಾಡಿದರು. ಉಪೇಂದ್ರ ಗೌಡ, ಬಿ.ಟಿ.ರವಿ, ಶಿವಣ್ಣ, ಯೋಗೇಂದ್ರ, ಸುಬೋದ್, ನಾಗರಮಕ್ಕಿ ದುರ್ಗಾ ದೇವಸ್ಥಾನ ಸಮಿತಿ ಅಧ್ಯಕ್ಷ ಮೂಡ್ಲಿ ವೆಂಕಟೇಶ್, ಉದ್ಯಮಿ ಶೇಖರ ಶೆಟ್ಟಿ ಇದ್ದರು.
170 ಜನ ನೇತ್ರ ಪರೀಕ್ಷೆ ಮಾಡಿಸಿಕೊಂಡರು. ಇವರಲ್ಲಿ 20 ಜನರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.