ನರಸಿಂಹರಾಜಪುರ: ಅತಿ ಪ್ರಾಚೀನ ಸಂಸ್ಕೃತಿಯೇ ಜಾನಪದ ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಜಾನಪದ ಬಾಲಾಜಿ ಹೇಳಿದರು.
ಇಲ್ಲಿ ಗುರುವಾರ ಪರಿಷತ್ ತಾಲ್ಲೂಕು ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 257 ವಿವಿಧ ಜಾನಪದ ನೃತ್ಯ, 52 ಜಾನಪದ ಹಾಡು, 5 ಮಹಾನ್ ಗ್ರಂಥಗಳಿವೆ. ಮಲೆ ಮಹದೇಶ್ವರ, ಸವದತ್ತಿ ಯಲ್ಲಮ್ಮ ಸೇರಿದಂತೆ 2,500 ಹಾಡುಗಳು ಜನಪ್ರಿಯಗೊಂಡಿವೆ. ಕನ್ನಡ ಜಾನಪದ ಪರಿಷತ್ತು ಯಾವುದೇ ಅನುದಾನ ಪಡೆಯದೆ ಮುನ್ನಡೆಯುತ್ತಿದೆ ಎಂದರು.
ಜಾನಪದ ಕಲಾವಿದ ಕೆ.ಆರ್.ನಾಗರಾಜ್ ಪುರಾಣಿಕ್ , ಪ್ರಾಧ್ಯಾಪಕ ಡಾ.ಸೈಯದ್ ನಿಜಾಮುದ್ದೀನ್ ಮಾತನಾಡಿದರು.
ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್, ಎಲ್ಲ ಪ್ರಕಾರದ ಜಾನಪದ ಕಲೆ ಉಳಿಸಲು ಆದ್ಯತೆ ನೀಡಲಾಗುವುದು ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ಶೆಟ್ಟಿಕೊಪ್ಪ ಎಂ.ಮಹೇಶ್ ಅವರಿಗೆ ಎತ್ತಿನ ಗಾಡಿಯ ನೊಗ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. ನೆರಲೆ ಕೊಪ್ಪ ಅಂಟಿಗೆ ಪಿಂಟಿಗೆ ಕಲಾವಿದ ಡಿ.ಜಿ.ಸತೀಶ್ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಜಾತ್ರಾ ಸಮಿತಿಯ ಸಂಚಾಲಕ ರೇವುನಾಯ್ಕ, ಪತ್ರಕರ್ತ ಹಾತೂರು ಪ್ರಭಾಕರ್, ಕಲಾ ಪೋಷಕ ಗಾಂಧಿಗ್ರಾಮದ ಕೆ.ಎನ್.ನಾಗರಾಜು, ಅಭಿನವ ಗಿರಿರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.