ADVERTISEMENT

ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದ ಅಧಿಕಾರಿಗಳು: ವೈ.ಎಸ್.ವಿ. ದತ್

ಅಂತರಗಟ್ಟೆ ದುರ್ಗಾಂಬಾ ಜಾತ್ರೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 2:34 IST
Last Updated 14 ಫೆಬ್ರುವರಿ 2021, 2:34 IST
ವೈ.ಎಸ್.ವಿ.ದತ್ತ
ವೈ.ಎಸ್.ವಿ.ದತ್ತ   

ಅಜ್ಜಂಪುರ: ‘ಲಕ್ಷಾಂತರ ಭಕ್ತರು ಸೇರುವ ಅಂತರಗಟ್ಟೆ ದುರ್ಗಾಂಬಾ ಜಾತ್ರಾ ಮಹೋತ್ಸವಕ್ಕೆ ಮುಜರಾಯಿ ಇಲಾಖೆ ಸಿದ್ಧತೆ ನಡೆಸಿಲ್ಲ. ಜಾತ್ರೆಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿಲ್ಲ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ’ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ದೂರಿದರು.

ತಾಲ್ಲೂಕಿನ ಅಂತರಗಟ್ಟೆ ದುರ್ಗಾಂಬಾ ದೇವಾಲಯಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ‘ಇದು ಅಧಿಕಾರಿಗಳ ಜಾತ್ರೆ ಅಲ್ಲ. ಪರಂಪರಾನುಗತವಾಗಿ ನಡೆಸಿಕೊಂಡು ಬಂದಿರುವ ಭಕ್ತರ ಮತ್ತು ಸ್ಥಳೀಯರ ಜಾತ್ರೆ. ಇವರನ್ನು ವಿಶ್ವಾಸಕ್ಕೆ ಪಡೆಯದೇ ಇರುವುದರಿಂದ ಜಾತ್ರೆ ಸಂಭ್ರಮ ಕಳೆಗುಂದಿದೆ. ನೀರಸ ವಾತಾರವಣ ಮನೆಮಾಡಿದೆ. ಇದು ಸ್ಥಳೀಯರು ಮತ್ತು ಭಕ್ತರಿಗೆ ನಿರಾಸೆ ತಂದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ದೇವಾಲಯ ಸುತ್ತಲಿನ 300 ಮೀ ಒಳಗೆ ದಿನಸಿ ಅಂಗಡಿ, ಹೂ-ಹಣ್ಣು ವ್ಯಾಪಾರ ನಿಷೇಧಿಸಿದೆ. ಇದು ಸಣ್ಣಪುಟ್ಟ, ಬೀದಿ ಬದಿ ವ್ಯವಹಾರಸ್ಥರಿಗೆ ಹೊಡೆತ ಬಿದ್ದಿದೆ. ಅವರ ಬದುಕಿನ ಹಕ್ಕನ್ನು ಕಸಿಯದೇ, ವ್ಯಾಪಾರಸ್ಥರಿಗೆ ವ್ಯವಹಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ADVERTISEMENT

‘ದೇವಾಲಯದ ಆದಾಯಕ್ಕೆ ತಕ್ಕಂತೆ ದೇವಾಲಯದ ಅಭಿವೃದ್ಧಿ ಆಗಿಲ್ಲ. ತಾವು ಶಾಸಕರಾಗಿದ್ದಾಗ ₹ 1 ಕೋಟಿ ಅನುದಾನದಲ್ಲಿ ಚಾವಣಿ, ನೆಲಹಾಸು ಮತ್ತು ₹ 1 ಕೋಟಿ ಅನುದಾನದಲ್ಲಿ ಡಾರ್ಮಿಟರಿ ಕಟ್ಟಡ ನಿರ್ಮಿಸಲಾಗಿತ್ತು. ಅದರ ಹೊರತಾಗಿ ಈವರೆಗೂ ಯಾವುದೇ ದೇವಾಲಯ ಬೆಳವಣಿಗೆ ಕಂಡಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ಪಂಚಾಯಿತಿ ಮಾಜಿ ಅಧ್ಯಕ್ಷ ಕುಮಾರ್, ಬೀರೂರು ಪುರಸಭಾ ಸದಸ್ಯ ಮೋಹನ್, ಮುಖಂಡ ಹಾಲಸಿದ್ದಪ್ಪ, ಪ್ರಶಾಂತ್, ನಾಗೇಂದ್ರ ಪ್ರಸಾದ್, ಪ್ರೇಮ್ ಕುಮಾರ್, ಮುಬಾರಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.