ಕಡೂರು: ರಾಜ್ಯದಲ್ಲಿ ತಾಯಂದಿರ ಮರಣ ತಡೆಗಟ್ಟಲು ಹಾಗೂ ಬಾಣಂತಿಯರ ಆರೈಕೆ ಹೆಚ್ಚಿಸಲು ರಾಜ್ಯದ ಪ್ರತಿ ತಾಲ್ಲೂಕು ಆಸ್ಪತ್ರೆಗಳು 24X7 ಅವಧಿಯೂ ಕಾರ್ಯನಿರ್ವಹಿಸುವಂತೆ ಕ್ರಮವಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಕಡೂರು ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.
ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಸಲುವಾಗಿ ಹೆಚ್ಚುವರಿ ಘಟಕ ಸ್ಥಾಪಿಸುವಂತೆ ಶಾಸಕ ಕೆ.ಎಸ್.ಆನಂದ್ ಕೋರಿದ್ದಾರೆ. ಒಬ್ಬ ಪ್ರಸೂತಿತಜ್ಞರು, ಒಬ್ಬ ಮಕ್ಕಳ ತಜ್ಞರು ಮತ್ತು ಒಬ್ಬ ಅರಿವಳಿಕೆ ತಜ್ಞರನ್ನು ಶೀಘ್ರವಾಗಿ ನಿಯೋಜಿಸುವುದಾಗಿ ತಿಳಿಸಿದರು.
ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ಪ್ರಮಾಣ ಕಡಿಮೆ ಇರುವುದರಿಂದ ಅಲ್ಲಿನ ವೈದ್ಯರನ್ನು ಬೇರೆಡೆ ನಿಯೋಜಿಸುವ ಪ್ರಸ್ತಾವ ಕೈಬಿಡಬೇಕು. ಹಿರೇನಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ಒದಗಿಸಬೇಕು. ಯಗಟಿ ಆಸ್ಪತ್ರೆಗೆ ಹುದ್ದೆ ಮಂಜೂರಾಗಿದ್ದರೂ ಭರ್ತಿ ಆಗಿಲ್ಲ. ಅಲ್ಲಿಗೂ ವೈದ್ಯರನ್ನು ನಿಯೋಜಿಸುವ ಬಗ್ಗೆ ಕ್ರಮ ವಹಿಸಬೇಕು ಎಂದು ಶಾಸಕ ಆನಂದ್ ಗಮನ ಸೆಳೆದರು.
ಯಗಟಿ ಆಸ್ಪತ್ರೆಗೆ ತಜ್ಞ ವೈದ್ಯರ ನಿಯೋಜನೆ ಬಗ್ಗೆ ಕ್ರಮ ವಹಿಸಲಾಗುವುದು. ಲಭ್ಯತೆ ಆಧಾರದಲ್ಲಿ ಇತರ ಬೇಡಿಕೆ ಪರಿಗಣಿಸಲಾಗುವುದು. ವೈದ್ಯರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವಂತೆ ಸಚಿವ ಸೂಚಿಸಿದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಕಡೂರು ಮತ್ತು ಬೀರೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗಳು ಉತ್ತಮ ಸೇವೆ ನೀಸುತ್ತಿವೆ. ಕಡೂರು ಆಸ್ಪತ್ರೆಗೆ ಜನಸಂಖ್ಯೆಗೆ ಅನುಗುಣವಾಗಿ ತಜ್ಞ ವೈದ್ಯರು, ತಾಲ್ಲೂಕಿನ ಪ್ರಮುಖ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವಂತೆ ಮನವಿ ಮಾಡಿದರು.
ಆಸ್ಪತ್ರೆಯ ವಿವಿಧ ವಿಭಾಗಗಳನ್ನು ದಿನೇಶ್ ಗುಂಡೂರಾವ್ ಪರಿಶೀಲಿಸಿದರು.
ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ, ಪುರಸಭೆ ಸದಸ್ಯರಾದ ತೋಟದಮನೆ ಮೋಹನ್ಕುಮಾರ್, ಸೈಯದ್ ಯಾಸೀನ್, ಇಒ ಸಿ.ಆರ್.ಪ್ರವೀಣ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂದಿಕಲ್ಲೇಶ್, ಬಾಸೂರು ಚಂದ್ರಮೌಳಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಚಂದಾ, ಡಾ.ಗುರುಮೂರ್ತಿ, ಡಾ.ಕಿರಣ್, ಡಾ.ಕೆ.ಎಂ.ದೀಪಕ್, ಡಾ.ಮೋಹನ್, ಚಂದ್ರೇಗೌಡ, ಯಗಟಿ ಗೋವಿಂದಪ್ಪ, ಕಂಸಾಗರ ರೇವಣ್ಣ, ಧರ್ಮರಾಜ್, ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.