ಸೀತೂರು(ಎನ್.ಆರ್.ಪುರ): ‘ಅಡಿಕೆ ಹಳದಿ ಎಲೆ ರೋಗದ ಬಗ್ಗೆ ವೈಜ್ಞಾನಿಕ ಸಂಶೋಧನೆ ಮುಂದುವರಿಸಬೇಕು’ ಎಂದು ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾ ಮಂಡಳ ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ಒತ್ತಾಯಿಸಿದರು.
ಇಲ್ಲಿನ ವಿಎಸ್ಎಸ್ ಎನ್ ಸಂಭಾಗಣದಲ್ಲಿ ಶುಕ್ರವಾರ ತೋಟಗಾರಿಕಾ ಇಲಾಖೆ ಹಾಗೂ ವಿಎಸ್ಎಸ್ಎನ್ ಆಶ್ರಯದಲ್ಲಿ ನಡೆದ ಅಡಿಕೆ ಹಳದಿ ಹಳದಿ ಎಲೆ ರೋಗದ ಬಗ್ಗೆ ತರಬೇತಿ ಕಾರ್ಯಕ್ರಮದ ಅಧಕ್ಷತೆ ವಹಿಸಿ ಅವರು ಮಾತನಾಡಿದರು.
‘ಇದುವರೆಗೂ ಅಡಿಕೆ ಹಳದಿ ರೋಗದ ಬಗ್ಗೆ ಸಂಪೂರ್ಣ ಸಂಶೋಧನೆ ಆಗಿಲ್ಲ. ವಿಜ್ಞಾನಕ್ಕೆ ಮುಕ್ತಾಯ ಎಂಬುದು ಇಲ್ಲ. ಶೃಂಗೇರಿ, ಮೇಗುಂದ ಹೋಬಳಿಯಲ್ಲಿ ಹಳದಿ ಎಲೆ ರೋಗದ ತೋಟದಲ್ಲಿ ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ಅಡಿಕೆ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಚರ್ಚೆ ನಡೆಸಲಾಗಿದೆ. ಸರ್ಕಾರದಿಂದ ₹3.50 ಕೋಟಿ ಬಿಡುಗಡೆಯಾಗಿದೆ’ ಎಂದರು.
ಹಿರಿಯ ತೋಟಗಾರಿಕಾ ನಿರ್ದೇಶಕ ಎಚ್.ಕೆ.ಜಯದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ‘1914ರಲ್ಲಿ ಪ್ರಥಮ ಬಾರಿಗೆ ಕೇರಳ ರಾಜ್ಯದಲ್ಲಿ ಅಡಿಕೆ ಹಳದಿ ಎಲೆರೋಗ ಪ್ರಾರಂಭವಾಗಿತ್ತು. ನಂತರ ತಮಿಳುನಾಡು,ಕರ್ನಾಟಕ ಆಂದ್ರಪ್ರದೇಶ, ಮಹಾರಾಷ್ಟ್ರಕ್ಕೂ ವ್ಯಾಪಿಸಿದೆ. 1955ರಲ್ಲಿ ಕೇರಳ ರಾಜ್ಯದಲ್ಲಿ ಅಡಿಕೆ ಹಳದಿ ರೋಗಕ್ಕೆ ಪ್ರಥಮ ಬಾರಿಗೆ ಸಂಶೋಧನೆ ಪ್ರಾರಂಭವಾಯಿತು. ಮೊದಲು ಬೇರು ಹುಳು ಎಂದು ತೀರ್ಮಾನಿಸಲಾಗಿತ್ತು. ನಂತರ ಬ್ಯಾಕ್ಟೀರಿಯಾ, ಪಂಗಸ್ ವೈರಸ್ ನಿಂದ ಅಡಿಕೆ ಹಳದಿ ಎಲೆರೋಗ ಬರುತ್ತದೆ ಎಂದು ತೀರ್ಮಾನಿಸಲಾಗಿತ್ತು .ಅಂತಿಮವಾಗಿ ಪ್ಲೈಟೋ ಪಾಸ್ಮಾ ಎಂಬ ರೋಗ ಎಂದು ತೀರ್ಮಾನಕ್ಕೆ ಬರಲಾಗಿದೆ. ರೋಗ ಬಂದ ತೋಟಗಳನ್ನು ಸಮರ್ಪವಾಗಿ ನಿರ್ವಹಣೆ ಮಾಡಿದರೆ ಅಡಿಕೆ ಫಲಸಲು ಕಡಿಮೆಯಾಗುವುದಿಲ್ಲ, ಮಣ್ಣು ,ನೀರು ಗೊಬ್ಬರದ ನಿರ್ವಹಣೆ ಸರಿಯಾಗಿ ಮಾಡಬೇಕಾಗಿದೆ. ರೋಗ ಬಂದ ತೋಟಗಳಲ್ಲಿ ಅಂತರ ಬೆಳೆ ಬೆಳೆಯ ಬೇಕು’ ಎಂದರು.
ಮಾಜಿ ಮಂಡಲ ಪ್ರಧಾನ ಎಸ್.ಡಿ.ವಿ.ಗೋಪಾಲ್ ರಾವ್, ಗ್ರಾಮ ಪಂಚಾಯಿತಿ ಸದಸ್ಯ ಎಚ್.ಇ.ದಿವಾಕರ್, ಸೀತೂರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎನ್.ಪಿ.ರವಿ,ಸಹಾಯಕ ತೋಟಗಾರಿಕಾ ನಿರ್ದೇಶಕ ಪುನಿತ್, ಕೃಷಿಕರಾದ ಪಿ.ಕೆ.ಬಸವರಾಜ್, ಶಂಕರನಾರಾಯಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.