ಮೂಡಿಗೆರೆ: ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಸಂತೋಷ್ ಅವರ ಮೇಲೆ ಜೆ.ಎಂ.ರಸ್ತೆಯ ಅಹಮ್ಮದ್ ಎಂಬಾತ ತನ್ನ ಐವರು ಸಹಚರರೊಂದಿಗೆ ಹಲ್ಲೆ ನಡೆಸಿರುವ ಬಗ್ಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಾ.ಸಂತೋಷ್ ಅವರು ಬುಧವಾರ ಸಂಜೆ ಆಸ್ಪತ್ರೆಯ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರೊಂದಿಗೆ ಬಂದ ಅಹಮ್ಮದ್, ಅವರ ಆರೋಗ್ಯ ತಪಾಸಣೆ ಮಾಡುವಂತೆ ಸೂಚಿಸಿದ್ದಾರೆ. ರೋಗಿಯ ಚೀಟಿ ತರುವಂತೆ ವೈದ್ಯರು ಸೂಚಿಸುತ್ತಿದ್ದಂತೆ ಆಕ್ರೋಶಿತನಾದ ಅಹಮ್ಮದ್, ಬೇರೆ ವೈದ್ಯರ ಬಳಿ ತಪಾಸಣೆ ಮಾಡುವುದಾಗಿ ಹೇಳಿ ತೆರಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಐವರು ಸಹಚರರೊಂದಿಗೆ ಬಂದ ಅಹಮ್ಮದ್, ವೈದ್ಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅಹಮ್ಮದ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಘಟನೆಯ ವಿರುದ್ಧ ಆಕ್ರೋಶ: ‘ಆಸ್ಪತ್ರೆಯಲ್ಲಿ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಡಾ.ಸಂತೋಷ್ ಅವರು ರೋಗಿಗಳಿಗೆ ಉತ್ತಮವಾಗಿ ಸ್ಪಂದಿಸುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದರೂ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ವೈದ್ಯರ ಮೇಲೆ ಕ್ಷುಲ್ಲಕ ಕಾರಣದಿಂದ ಹಲ್ಲೆ ನಡೆಸಿರುವುದರಿಂದ ಆರೋಗ್ಯ ಸೇವೆಗೆ ಪೆಟ್ಟು ನೀಡಿದಂತಾಗಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮೂಡಿಗೆರೆಯ ಹಲವು ಸಂಘಟನೆಗಳು ಒತ್ತಾಯಿಸಿವೆ.
ಕೊರೊನಾ ವಾರಿಯರ್ಸ್ ಗೆ ರಕ್ಷಣೆ ಅಗತ್ಯ: ‘ಕೊರೊನಾ ಪ್ರಾರಂಭವಾದ ದಿನದಿಂದಲೂ ಅವಿರತವಾಗಿ ದುಡಿಯುತ್ತಿರುವ ವೈದ್ಯ ಡಾ. ಸಂತೋಷ್ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯವಾಗಿದ್ದು, ಪೊಲೀಸ್ ಇಲಾಖೆಯು ಕೊರೊನಾ ವಾರಿಯರ್ಸ್ ಗೆ ಸೂಕ್ತ ರಕ್ಷಣೆ ಒದಗಿಸಬೇಕು. ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಿ ಸೂಕ್ತ ಶಿಕ್ಷೆ ವಿಧಿಸಬೇಕು’ ಎಂದು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂಜಯ್ ಕೊಟ್ಟಿಗೆಹಾರ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.