ಚಿಕ್ಕಮಗಳೂರು: ‘ದೇಶದ ಪಾರಂಪರಿಕ ಚಿಕಿತ್ಸಾ ಪದ್ಧತಿಯಾದ ಆಯುರ್ವೇದ ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರೋಗ್ಯವಂತರನ್ನಾಗಿ ಮಾಡುತ್ತದೆ. ಆಯುರ್ವೇದದ ಮೂಲಕ ಪ್ರಕೃತಿಗೆ ಹೊಂದಿಕೊಂಡು ಬದುಕುವ ಜೀವನ ಶೈಲಿಯನ್ನು ನಾವು ಮತ್ತೆ ಅಭ್ಯಾಸ ಮಾಡಿಕೊಳ್ಳಬಹುದು. ಈ ಸೃಷ್ಟಿಯ ಭಾಗವಾದ ನಾವು ಅದಕ್ಕೆ ಪೂರಕವಾಗಿ ಬದುಕುವುದು ಅವಶ್ಯ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಬುಧವಾರ ನಗರದ ರಾಮಕೃಷ್ಣ ನರ್ಸಿಂಗ್ ಕಾಲೇಜಿನಲ್ಲಿ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ‘ಜನರಿಗಾಗಿ ಮತ್ತು ಜಗತ್ತಿಗಾಗಿ ಆಯುರ್ವೇದ’ ಎಂಬ ಘೋಷ ವಾಕ್ಯದೊಂದಿಗೆ ನಡೆದ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಾತ, ಪಿತ್ತ, ಕಫ ಈ ಮೂರು ಸಮಚಿತ್ತದಲ್ಲಿದ್ದರೆ ಅವನು ಆರೋಗ್ಯವಂತ. ಯಾವ ಸ್ಟೆತಸ್ಕೋಪ್, ಥರ್ಮಾಮೀಟರ್ ಇಡಬೇಕಾಗಿಲ್ಲ. ಇದರಲ್ಲಿ ವ್ಯತ್ಯಾಸ ಕಂಡರೆ ಆಹಾರದಲ್ಲಿ ಸರಿಪಡಿಸಿಕೊಂಡರೆ ಸಾಕು ಆರೋಗ್ಯ ಸರಿಯಾಗುತ್ತದೆ. ಹೀಗಾಗಿ ಪಾರಂಪರಿಕ ಚಿಕಿತ್ಸಾ ಪದ್ಧತಿಯ ಬಗ್ಗೆ ಜನರಿಗೆ ಅರಿವು ಮೂಡಿಸಿ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
‘ನೈಸರ್ಗಿಕ ಮತ್ತು ಶುದ್ಧ ಆಯುರ್ವೇದದ ಮೂಲಕವೇ ಆರೋಗ್ಯವನ್ನು ನಾನು ಸಮತೋಲನದಲ್ಲಿ ಇಟ್ಟುಕೊಂಡಿದ್ದೇನೆ’ ಎಂದರು. ಇದೇ ವೇಳೆ ಆಯುರ್ವೇದ ದಿನಾಚರಣೆಯ ಸ್ಮರಣಾರ್ಥ ವೃಕ್ಷಾರೋಹಣಾ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.