ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭಾನುವಾರ ಬಕ್ರೀದ್ ಆಚರಿಸಲಾಯಿತು. ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.ಬಹಳಷ್ಟು ಮಂದಿ ಹೊಸ ಉಡುಗೆಗಳನ್ನು ತೊಟ್ಟು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಪ್ರಾರ್ಥನೆ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
‘ಮಳೆ ಇದ್ದಿದ್ದರಿಂದ ಮೈದಾನದಲ್ಲಿ ಪ್ರಾರ್ಥನೆಗೆ ಹೋಗಿಲ್ಲ. ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದೆವು’ ಎಂದು ಜಾಮಿಯಾ ಮಸೀದಿ ಕಾರ್ಯದರ್ಶಿ ಮುದಾಸೀರ್ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.
ನಗರದ ಜಾಮಿಯಾ ಮಸೀದಿಯ ಗುರು ರಾಹಿ ಖಾಸ್ಮಿ ಅವರು ಪ್ರವಚನ ನೀಡಿದರು. ಪ್ರಾರ್ಥನೆ ಮುಗಿಸಿ ಹಲವರು ದಾನ ಮಾಡಿದರು.
ಸ್ನೇಹಿತರು, ಸಂಬಂಧಿಕರ ಮನೆಗಳಿಗೆ ಭೇಟಿ ನೀಡಿದರು. ಮನೆಗಳಲ್ಲಿ ಬಿರಿಯಾನಿ, ಶಾವಿಗೆ ಪಾಯಸ ಮೊದಲಾದ ಹಬ್ಬದೂಟ ಸವಿದರು.
‘ಮಾನವೀಯ ಮೌಲ್ಯ, ಸೋದರತೆ, ಸಹಬಾಳ್ವೆ ಎತ್ತಿಹಿಡಿಯುವುದು, ದೇವನಿಗಾಗಿ ಎಂಥ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸಂದೇಶವನ್ನು ಈ ಹಬ್ಬವು ಸಾರುತ್ತದೆ’ ಎಂದು ಉಪ್ಪಳ್ಳಿಯ ಇಬ್ರಾಹಿಂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.